ಭಗವದ್ಗೀತೆಯ ಶ್ಲೋಕಾರ್ಥ-೩೧
ಪ್ರಥಮೋಧ್ಯಾಯ:
ಅರ್ಜುನ ವಿಷಾದಯೋಗ
ಶ್ಲೋಕ ..೩೧
ಅರ್ಜುನ ಉವಾಚ…
ನಿಮಿತ್ತಾನಿ ಚ ಪಶ್ಯಾಮಿ ವಿಪರೀತಾನಿ ಕೇಶವ ||
ನ ಚ ಶ್ರೇಯೋನುಪಶ್ಯಾಮಿ ಹತ್ವಾ ಸ್ವಜನ ಮಾಹವೇ ||
ಅರ್ಜುನ ಕೃಷ್ಣನ ಬಳಿ ತನ್ನ ಮಾನಸಿಕ ಹಾಗೂ ದೈಹಿಕ ಅಶಕ್ತತೆಯ ಬಗ್ಗೆ ಹೇಳುತ್ತಾ , ತನಗೆ ನಿಲ್ಲಲೂ ಸಹ ಅಸಾಧ್ಯ ಆಗುತ್ತಿದೆ ..ಎಂದು ತಿಳಿಸುತ್ತಿದ್ದಾನೆ. "ನನ್ನವರು" ಎಂಬ ಮೋಹ ಮನುಷ್ಯನನ್ನು ಮಾನಸಿಕವಾಗಿ ತೊಳಲಾಡುವಂತೆ ಮಾಡಿ,ಅದು ಹೇಗೆ ದೇಹದ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ನಾವಿಲ್ಲಿ ಗಮನಿಸಬಹುದು ... ಅರ್ಜುನ ಧರ್ಮರಾಯನ ಧರ್ಮದ ಪಕ್ಷ ಬಿಟ್ಟು, ಎರಡೂ ಸೇನೆಯ ಮಧ್ಯದಲ್ಲಿ ನಿಂತಿದ್ದರಿಂದಲೇ, ಅವನಿಗೆ ಮನಸ್ಸಿಲ್ಲಿ ದ್ವಂದ್ವಾಭಿಪ್ರಾಯ ಉಂಟಾಗಲು ಕಾರಣವಾಗಿತ್ತು . ಧರ್ಮದ ಪಕ್ಷದಲ್ಲಿ ಸ್ಥಿರನಾಗಿದ್ದಾಗ ,ಎಲ್ಲಾ ಅಧಾರ್ಮಿಕರನ್ನೂ ಕೊಲ್ಲುವೆ ಎಂದು ಘರ್ಜಿಸಿದ್ದ ಅರ್ಜುನ ,ನಂತರ ಮೈ ಕಂಪಿಸುತ್ತಿದೆ..ನಿಲ್ಲಲೂ ಅಶಕ್ತನಾಗಿರುವೆ ಎನ್ನಲು ಕಾರಣ ಕೇವಲ ನನ್ನವರೆಂಬ ಕೃಪಾ ದೃಷ್ಟಿ. ಅರ್ಜುನ ಮೊದಲೂ ಸಹ ಎಲ್ಲರನ್ನು ನೋಡಿದ್ದರೂ ನಂತರ ಮನಸ್ಸಿನ ಕಣ್ಣಿಂದ ನೋಡಿದಾಗ ಅವನಲ್ಲಿ ಕರುಣೆ ಜಾಗೃತವಾಯಿತು ...ಮನಸ್ಸು ದುರ್ಬಲವಾಗಿ ದೈಹಿಕ ದೌರ್ಬಲ್ಯದಿಂದ ಕುಸಿದನು..ಭಗವದ್ಗೀತೆ ಇದೇ ಕಾರಣಕ್ಕೆ ಮನುಷ್ಯರಿಗೆ ಅವಶ್ಯಕ ..ಯಾವಾಗ ಧರ್ಮದ ಸರಿಯಾದ ವಿವೇಚನೆ ಇಲ್ಲದೇ ನಾವು , ಮಾನಸಿಕವಾಗಿ ಕುಗ್ಗಿ ಹೋಗುತ್ತೇವೋ, ಆಗ ಬದುಕಿನಲ್ಲಿ ಬರುವ ಎಲ್ಲಾ ಕಷ್ಟಗಳಿಗೂ ಮೂಲವಾದ
ಅಹಂಕಾರ ಮಮಕಾರದ ಬಗ್ಗೆ ಗೀತೆಯಿಂದ ಅರಿವು ಪಡೆಯಬಹುದು .. ಪ್ರಬಲವಾದ ಇಚ್ಛಾಶಕ್ತಿ ಇದ್ದರೆ ಎಂತಹ ಸಮಸ್ಯೆಯನ್ನೂ ಸಹ ಎದುರಿಸಬಹುದು .
ಈ ಶ್ಲೋಕದಲ್ಲಿ ಅರ್ಜುನ ಕೃಷ್ಣನ ಬಳಿ , ತಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಮಾತ್ರ ಕುಸಿಯುತ್ತಿರುವುದಲ್ಲಾ .. “ಹೇ ಕೇಶವ….ಎಲ್ಲಾ ಕಡೆಯಿಂದಲೂ ಅಪಶಕುನಗಳೇ ಕಂಡು ಬರುತ್ತಿವೆ .. ಹಾಗೇ ಯುದ್ಧದಲ್ಲಿ ತಮ್ಮ ಸ್ವಜನ ಬಾಂಧವರನ್ನೇ ಕೊಂದು ಯಾವ ಶ್ರೇಯಸ್ಸನ್ನೂ ಪಡೆಯಲಾಗುವುದಿಲ್ಲ.” .ಎಂದನು . ಅರ್ಜುನನ ಮನಸ್ಥಿತಿಯಂತೆ ನಾವೂ ಸಹ ಹೀಗೆ ಮಾನಸಿಕವಾಗಿ ದುರ್ಬಲರಾದಾಗ ಏನೇ ಘಟಿಸಿದರೂ ಅಪಶಕುನವೇ ಎಂದು ಭಾವಿಸುತ್ತೇವೆ ..ನಕರಾತ್ಮಕವಾಗಿಯೇ ಯೋಚಿಸುತ್ತೇವೆ ..ಮಹಾಭಾರತದ ಉಲ್ಲೇಖದಂತೆ ಯುದ್ಧದ ಸಂದರ್ಭದಲ್ಲಿ ಹಿಂದಿನ ಕಾಲದಲ್ಲಿ ನಂಬುವಂತೆ ಅಪಶಕುನ ಸಂಭವಿಸಿದ್ದೂ ಇದೆ ..ಒಂದೇ ಪಕ್ಷದಲ್ಲಿ ಕ್ರಮವಾಗಿ ಹುಣ್ಣಿಮೆ ಮತ್ತು ಅಮಾವಾಸ್ಯೆಗೆ ಎರಡು ಗ್ರಹಣಗಳು ಸಂಭವಿಸಿತ್ತು..ರಣಹದ್ದುಗಳು ಆಗಸದಲ್ಲಿ ಹಾರಾಡುತ್ತಾ ರಕ್ತಪಾತದ ಮುನ್ಸೂಚನೆ ನೀಡಿದ್ದವು …ಪ್ರಾಣಿಗಳು ಆತಂಕದಲ್ಲಿ ಕೂಗುತ್ತಿದ್ದವು ಮತ್ತು ಪರಿಸರದಲ್ಲಿ ಬದಲಾವಣೆಯಾಗಿತ್ತು . ಬಲವಾಗಿ ಗಾಳಿ ಬೀಸಿ , ಗುಡುಗು ಸಿಡಿಲಿನ ಆರ್ಭಟ ಇತ್ತು..ಇದೆಲ್ಲವೂ ಅರ್ಜುನನ ಮನಸ್ಸಿಗೆ ಮೊದಲು ಯುದ್ಧೋನ್ಮಾದದಲ್ಲಿ ಬಂದಾಗ ಅರಿವಿಗೆ ಬಂದಿರಲಿಲ್ಲ..ಆದರೆ ಯಾವಾಗ ಮನಸ್ಸು ದುರ್ಬಲವಾಯಿತೋ ಆಗ ಎಲ್ಲವೂ ಅಪಶಕುನದಂತೆ ಭಾಸವಾಗಿ , ಕೇಶವನ ಬಳಿ .. ಯುದ್ಧ ಮಾಡಿದರೆ ತನ್ನವರನ್ನೇ ಕೊಲ್ಲಬೇಕಾಗುವುದು,ಅದರಿಂದ ಶ್ರೇಯಸ್ಸಾಗದು ಎಂದು ಕಾರಣ ಹೇಳಿ ತನ್ನ ಕರ್ತವ್ಯವಾದ ಧರ್ಮ ರಕ್ಷಣೆಗಾಗಿ ಯುದ್ಧ ಮಾಡುವುದನ್ನೇ ಮರೆತು ಮಾತನಾಡುತ್ತಿದ್ದಾನೆ ..ಮುಂದೆ ಅಹಂಕಾರ ವಶನಾಗಿ ಏನು ಹೇಳುವನು ? ನಾಳೆ ನೋಡೋಣ 🙏
ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ





