ಭಗವದ್ಗೀತೆಯ ಶ್ಲೋಕಾರ್ಥ- ಪ್ರಥಮೋಧ್ಯಾಯ: ಅರ್ಜುನ ವಿಷಾದಯೋಗ
ಶ್ಲೋಕ ..೨- ಸಂಜಯ ಉವಾಚ…
ದೃಷ್ಟ್ವಾತು ಪಾಂಡವಾನೀಕಂ ವ್ಯೂಢಂ ದುರ್ಯೋಧನಸ್ತದಾ|
ಆಚಾರ್ಯಮುಪಸಂಗಮ್ಯ ರಾಜಾ ವಚನಮಬ್ರವೀತ್||
ಕುರುಕ್ಷೇತ್ರದ ರಣಭೂಮಿಯಲ್ಲಿ ಕೌರವರು ಮತ್ತು ಪಾಂಡವರ ನಡುವೆ ನಡೆಯಲಿರುವ ಯುದ್ದದ ದೃಶ್ಯಾವಳಿಯನ್ನು ಹುಟ್ಟು ಕುರುಡನಾದ ಧೃತರಾಷ್ಟ್ರನಿಗೆ ಅವನ ಸಾರಥಿಯಾದ ಸಂಜಯ ವಿವರಿಸುತ್ತಿದ್ದಾನೆ. ಭಗವಾನ್ ವೇದವ್ಯಾಸರು ನೀಡಿದ ದಿವ್ಯ ದೃಷ್ಟಿಯಿಂದ ಸಂಜಯ ಯುದ್ಧಭೂಮಿಯಲ್ಲಿ ನಡೆಯುವುದನ್ನು ಯಥಾವತ್ತಾಗಿ ಧೃತರಾಷ್ಟ್ರನಿಗೆ ತಿಳಿಸುವ ಸಾಮರ್ಥ್ಯ ಪಡೆದಿದ್ದಾನೆ…
ಧೃತರಾಷ್ಟ್ರನ ಸಾರಥಿಯಾಗಿದ್ದ ಸಂಜಯ ಬಹಳ ನಂಬಿಕಸ್ತ..ಹಾಗೂ ಭಗವಂತನಲ್ಲಿ ಶ್ರದ್ಧೆ ಭಕ್ತಿ ಉಳ್ಳವನು .. ಅವನ ಪ್ರಾಮಾಣಿಕತೆಯಿಂದಲೇ ವ್ಯಾಸರು ಬೇರೆ ಯಾರಿಗೂ ನೀಡದ ಅದ್ಭುತ ಶಕ್ತಿಯನ್ನು, ಜವಾಬ್ದಾರಿಯನ್ನು ಸಂಜಯನಿಗೆ ಕೊಟ್ಟಿದ್ದಾರೆ . ಧೃತರಾಷ್ಟ್ರ ಕೇಳಿದ ಪ್ರಶ್ನೆ , ” ತನ್ನ ಮಕ್ಕಳು ಮತ್ತು ಪಾಂಡವರು ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಏನು ಮಾಡಿದರು?? ” ಎಂಬುದಕ್ಕೆ ಸಂಜಯ ಉತ್ತರಿಸುವನು……” ಹೇ ರಾಜನ್…ಯುದ್ಧ ಆರಂಭ ಆಗುವ ಕಾಲ ಘಟ್ಟದಲ್ಲಿ ದುರ್ಯೋಧನನು ಎದುರಾಳಿ ಪಕ್ಷವಾದ ಪಾಂಡವರ ಸೈನ್ಯದ ವ್ಯೂಹ ರಚನೆಯನ್ನು ನೋಡಿ ತನ್ನ ಗುರುಗಳಾದ ದ್ರೋಣಾಚಾರ್ಯರ ಬಳಿ ಬಂದು ಈ ಮಾತನ್ನು ಹೇಳುವನು”. ಯುದ್ಧಾಪೇಕ್ಷಿಯಾದ ದುರ್ಯೋಧನ ಬಂದು ದ್ರೋಣರ ಬಳಿ ಏನು ಹೇಳಿದ ?? ಮುಂದಿನ ಶ್ಲೋಕದಲ್ಲಿ ನೋಡೋಣ
ಸುನೀತಾ ಉಡುಪ ಜನ್ನಾಡಿ ಬಿದ್ಕಲ್ ಕಟ್ಟೆ





