ಭಾರತ ಸಂವಿಧಾನವೆಂಬ ಬೆಳಕಿನ ದಾರಿ…

ಸಮಾನತೆಯ ಆಶಯದಿಂದ ಜಗತ್ತಿನ ಹೃದಯ ಗೆದ್ದ ಭಾರತ ಸಂವಿಧಾನಕ್ಕೆ ಈಗ 75ವರ್ಷ. ಶೋಷಿತರ ಮೇಲಿನ ಸಾವಿರಾರು ವರ್ಷಗಳ ಅನ್ಯಾಯವನ್ನು ಕೊನೆಗಾಣಿಸುವ ತಮ್ಮ ಕನಸಿಗೆ ಸಂವಿಧಾನದ ಮೂಲಕ ರೆಕ್ಕೆಕಟ್ಟಿದವರು ಬಾಬಾ ಸಾಹೇಬ್ ಅಂಬೇಡ್ಕರ್.ಅದಕ್ಕಾಗಿ ಅವರು ಸವೆಸಿದ ದಾರಿ ಸುಲಭದ್ದಾಗಿರಲಿಲ್ಲ.ಪ್ರಪಂಚದ ಮೂಲೆ ಮೂಲೆಯ ಸಮತೆಯ ಆಶಯಗಳನ್ನು ಹುಡುಕಿ,ಭಾರತ ನೆಲದ ಶೋಷಣೆಯ ಗಾಯಗಳನ್ನು ಮಾಯಿಸುವ ಮುಲಾಮು ಕಂಡುಹಿಡಿದರು. ಈ ದಾರಿಯಲ್ಲಿ ಅವರು ಇಡೀ ದೇಶವನ್ನೂ, ದೇಶದ ಜನರ ಕಷ್ಟ–ಸುಖಗಳನ್ನು ಅಧ್ಯಯನ ಮಾಡಿದರು. 

ಜಾತಿತಾರತಮ್ಯದ ಮೂಲ ಬೇರುಗಳನ್ನು ಶೋಧಿಸಿದರು.ಯಾವ ಔಷಧಿ ಈ ತಾರತಮ್ಯದ ರೋಗವನ್ನು ವಾಸಿ ಮಾಡಬಹುದು ಎಂದು ಮನಗಂಡರು.ಇದೆಲ್ಲದರ ಪ್ರತಿಫಲವಾಗಿ ಭಾರತ ಸಂವಿಧಾನ ಸಿದ್ಧಗೊಂಡಿತು. ಸಂವಿಧಾನ ಜಾರಿ ಮಾಡುವವರು ಸಮರ್ಥರಾಗಿರ ಬೇಕು ಎಂದು ಬಾಬಾಸಾಹೇಬರು ಕೊನೆಯಲ್ಲಿ ಹೇಳಿಹೋದರು. 

ಅವರು ಹೇಳಿದ್ದು ನಿಜವಾಯಿತು. ಕೊನೆಗೂ ಸಂವಿಧಾನ ದೇಶದ ಜನರ ಬದುಕಿನ ಭಾಗವಾಗದೆ ಆಡಳಿತ ಮಾಡುವವರ ಕಾರ್ಯಕ್ರಮ ವಾಯಿತು.ಈ ಕಾರಣದಿಂದ ಸಮಾಜಮುಖಿ ಆಲೋಚನೆಯ ಸರ್ಕಾರಗಳು ತಮ್ಮ ಆಶಯದ ಈಡೇರಿಕೆಗೆ ಸಂವಿಧಾನವನ್ನು ಮುನ್ನಲೆಗೆ ತರುತ್ತವೆ. ಇದೀಗ ಕರ್ನಾಟಕ ಸರ್ಕಾರ ಸಂವಿಧಾನಕ್ಕೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮನೆಮನೆಗೂ ಸಂವಿಧಾನವೆಂಬ ಆಂದೋಲನವನ್ನೇ ಕೈಗೊಂಡಿದೆ.ಇದು ಭಾರತದ ಮಟ್ಟಿಗೆ ನಿಜಕ್ಕೂ ಮಹತ್ವದ ವಿದ್ಯಮಾನ. ಕೋಮುವಾದ, ಜಾತಿವಾದಗಳು ಹೊಸ ರೂಪ ಪಡೆಯುತ್ತಿರುವ,ಆ ಮೂಲಕ ಶೋಷಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಸರ್ಕಾರಿ ಇಲಾಖೆಯೊಂದು ಸಂವಿಧಾನವನ್ನು ಹೊತ್ತು ಸಾಗುತ್ತಿರುವುದು ಮಹತ್ತರವಾದುದು.ಇದರಿಂದಾಗಿ ದಶಕಗಳಿಂದ ಸಂವಿಧಾನದ ನೆರಳಿನಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿರುವ ಸಂಘಟನೆಗಳಿಗೆ ಮತ್ತು ಸಂವಿಧಾನವನ್ನು ಹೊಸ ಪರಿಭಾಷೆಯಲ್ಲಿ ಅರ್ಥಮಾಡಿಕೊಳ್ಳಲು ಕಾಯುತ್ತಿದ್ದ ಯುವಜನತೆಗೆ ಹೊಸ ಒಂದು ಬೆಳಕಿನ ದಾರಿ ಸಿಕ್ಕಂತಾಗಿದೆ. ಕಳೆದ ಏಳೂವರೆ ದಶಕದಿಂದ ಭಾರತದಲ್ಲಾದ ಸಾಮಾಜಿಕ ಬದಲಾವಣೆಗಳ ಹಿಂದೆ ಭಾರತ ಸಂವಿಧಾನದ ಪಾಲಿದೆ. ಸಂವಿಧಾನ ರೂಪಿತವಾಗಿ ಅಂಗೀಕಾರಗೊಂಡ ಇಪ್ಪತ್ತೈದು ವರ್ಷಗಳ ನಂತರ ಕರ್ನಾಟಕದಲ್ಲಿ ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿಗಳು ಜನ್ಮತಾಳಿದವು. ಈ ಎರಡೂ ಚಳವಳಿಗಳ ಜೊತೆಜೊತೆಗೆ ಕಾರ್ಮಿಕ ಹೋರಾಟಗಳು,ಮಹಿಳಾ ಹೋರಾಟಗಳೂ, ವಿದ್ಯಾರ್ಥಿ ಹೋರಾಟಗಳೂ ನಡೆದು ಕರ್ನಾಟಕ ಮಣ್ಣಿನ ಪ್ರತಿಭಟನಾತ್ಮಕ ವಿವೇಕವನ್ನು ಕಾಪಿಟ್ಟುಕೊಂಡವು.ಈ ಎಲ್ಲಾ ಚಳವಳಿಗಳೂ ಆತ್ಯಂತಿಕವಾಗಿ ಅವಲಂಭಿಸಿದ್ದು ನಮ್ಮ ಸಂವಿಧಾನವನ್ನೇ. 

ಆಳುವ ಪಕ್ಷಗಳು ಸಂವಿಧಾನದ ಆಶಯಗಳ ವಿರುದ್ಧ ನಡೆದುಕೊಂಡಾಗ ಎಚ್ಚರಿಸುವ,ಜನರಿಗೆ ಅರಿವು ಮೂಡಿಸುವ ಕೆಲಸಗಳನ್ನು ಈ ಚಳವಳಿಗಳು ಮಾಡುತ್ತಾ ಬಂದಿವೆ.ಈ ಕಾರಣದಿಂದಾಗಿ ಆಳುವವರು ಕೋಮುವಾದಿಗಳು,ಜಾತಿವಾದಿಗಳಾಗಿದ್ದರೂ ಸಾಂವಿಧಾನಿಕ ನಡವಳಿಕೆಗಳನ್ನು ಅನಿವಾರ್ಯವಾಗಿ ರೂಡಿಸಿಕೊಳ್ಳಬೇಕಾಯಿತು. ಕಾಲ ಸರಿದಂತೆ ತಾರತಮ್ಯಗಳಾಚೆಗಿನ ಸಮತೆಯ ಸಮಾಜವೊಂದು ರೂಪುಗೊಳ್ಳಬಹುದು ಎಂಬ ಹಿರಿಯರ ಕನಸು ಈಗ ವಿಫಲವಾಗಿದೆ.ಜಾತಿ ಧರ್ಮಗಳ ಹೆಸರಿನಲ್ಲೇ ಅಸಾಂವಿಧಾನಿಕ ಕೃತ್ಯಗಳು ನಡೆಯುತ್ತಿವೆ.ದಲಿತ-ಮಹಿಳೆಯರ-ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಹಿಂದೆಂದಿಗಿಂಂತಲೂ ಹೆಚ್ಚಾಗುತ್ತಿವೆ.ವ್ಯವಸ್ಥಿತವಾಗಿ ಸಂವಿಧಾನವನ್ನು ಜನರ ನಂಬಿಕೆಯಾಚೆಗೆ ತಳ್ಳುವ, ಅದರ ಮೂಲ ಆಶಯಗಳಾದ ಧರ್ಮ, ನಿರಪೇಕ್ಷತೆ ಮತ್ತು ಬಂಧುತ್ವವನ್ನು ಧರ್ಮ ವಿರೋಧ ಎಂಬಂತೆ ಬಿಂಬಿಸುವ ಸಮಾಜವಿರೋಧಿಗಳ ಕೆಲಸ ಸ್ವಲ್ಪಮಟ್ಟಿಗೆ ಸಫಲವಾಗುತ್ತಿದೆ. ಈ ಕಾಲದಲ್ಲಿ ಮುನ್ನಲೆಗೆ ಬರಬೇಕಿದ್ದ ನಿರುದ್ಯೋಗ, ಜಾತೀಯತೆ, ಲಿಂಗ ತಾರತಮ್ಯ ಮತ್ತು ಶೈಕ್ಷಣಿಕ ಆಶಯಗಳು ಹಿನ್ನೆಲೆಗೆ ಸರಿದು ಧರ್ಮ ಮತ್ತು ಕ್ರೂರ ಜಾತೀಯತೆಗಳು ಮೆರೆಯುತ್ತಿವೆ. ಈ ಸಂದರ್ಭವನ್ನು ಸಂವಿಧಾನದ ಜೊತೆಗೇ ಎದುರಿಸಬೇಕಾಗಿದೆ. ಯಾಕೆಂದರೆ, ಸಂವಿಧಾನದಲ್ಲಿ ಮಾತ್ರವೇ ಸಹಜ-ಸಹಬಾಳ್ವೆಯ ಮಾದರಿಗಳಿವೆ.

ಮೈತ್ರಿ-ಕಾರುಣ್ಯದ ಆಶಯಗಳಿವೆ. ಸಹಜೀವಿಗಳನ್ನು ತಮ್ಮಂತೆ ಕಾಣುವ, ಎಂತಹಾ ಸಂದರ್ಭದಲ್ಲೂ ವ್ಯಕ್ತಿ ಘನತೆಯನ್ನು ಕಾಪಾಡಿಕೊಳ್ಳುವ,ಇನ್ನೊಬ್ಬರ ಬದುಕುಗಳನ್ನು ಮುರುಟಿಹೋಗದಂತೆ ತಡೆಯುವ ಕ್ರಿಯಾತ್ಮಕ ಪಾಠಗಳಿವೆ ಮತ್ತು ಎದೆಯಾಳದ ಆಶಯಗಳೇ ನಮ್ಮನ್ನು ಕೈಹಿಡಿದು ನಡೆಸುವ ಬದುಕಿನ ಕ್ರಮವಿದೆ.ಈ ಕಾರಣಕ್ಕಾದರೂ ನಮ್ಮ ಸಂವಿಧಾನ ನಮ್ಮೆಲ್ಲರ ಬದುಕಿನ ಮೂಲ ಬಿತ್ತಿಯಾಗಬೇಕಿದೆ. ಈ ಕಾರಣಕ್ಕಾಗಿ ನಾವು ಬದುಕುತ್ತಿರುವ ಕಾಲ ಮತ್ತು ದೇಶದ ಧರ್ಮಸಂವಿಧಾನವಾಗ ಬೇಕಾಗಿದೆ.ಕೊಲ್ಲುವ ಭಾಷೆಗೆ ಉತ್ತರವಾಗಿ, ಹೊಸ ಹತಾರಗಳೊಂದಿಗೆ ನಮ್ಮೆದುರು ನಿಂತಿರುವ ಸಾಮ್ರಾಜ್ಯಶಾಹಿ, ಬಂಡವಾಳಶಾಹಿ ಶಕ್ತಿಗಳ ವಿರುದ್ಧದ ಒಡಲ ಹಾಡಾಗಿ ನಮ್ಮ ಸಂವಿಧಾನ ಹೊಮ್ಮಬೇಕಿದೆ. 

ಭೂಮಿ-ವಸತಿ-ಉದ್ಯೋಗ ವಂಚಿತರ,ಜಾತಿಯ ಕಾರಣಕ್ಕೆ ದೌರ್ಜನ್ಯಕ್ಕೆ ತುತ್ತಾದವರ,ಜಗತ್ತಿನ ಅರ್ಧದಷ್ಟು ಜನಸಂಖ್ಯೆಯಿದ್ದರೂ ದ್ವಿತೀಯ ದರ್ಜೆಯ 

Leave a Reply

Your email address will not be published. Required fields are marked *

error: Content is protected !!