ಪಡುಬಿದ್ರೆ: ಕಟ್ಟಡದಿಂದ ಬಿದ್ದು ವ್ಯಕ್ತಿ ಮೃತ್ಯು
ಪಡುಬಿದ್ರಿ ಜು.29(ಉಡುಪಿ ಟೈಮ್ಸ್ ವರದಿ): ಕಟ್ಟಡದ ಮೇಲಿನಿಂದ ಆಯತಪ್ಪಿ ಬಿದ್ದು ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಕಾಪು ತಾಲೂಕಿನ ಎಲ್ಲೂರು ಗ್ರಾಮದಲ್ಲಿ ನಡೆದಿದೆ.
ಕಾಪುವಿನ ಎಲ್ಲೂರು ಗ್ರಾಮದ ಯುಪಿಸಿಎಲ್ ಕಂಪೆನಿಯ ಆವರಣದಲ್ಲಿನ ಹಳೆಯ Flue Gad Desulferisation ಸೈಟಿನಲ್ಲಿ ನಡೆಯುತ್ತಿರುವ ಕಟ್ಟಡವನ್ನು ಕೆಡವುವ ಕೆಲಸವನ್ನು ನಿರ್ವಹಿಸುತ್ತಿದ್ದ ವೇಳೆ ಕೆಲಸಗಾರರಾದ ಸುಖ್ವಿಂದರ್ ಸಿಂಗ್, ಬಲ್ಜಿಂದರ್ ಸಿಂಗ್, ರಾಮಚಂದ್ರ ಮೀನಾ ಚೊಕ್ಕ, ಮುಲಾ ರಾಮ್ ರವರು ಕಟ್ಟಡದ ಮೇಲಿನಿಂದ ಆಯತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ಪೈಕಿ ಮುಲ್ರಾಮ್ ರವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಉಳಿದವರು ತೀವ್ರ ಹಾಗೂ ಸಾಮಾನ್ಯ ಸ್ವರೂಪದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಗೆ ಕಟ್ಟಡ ಕೆಡವುವ ಕೆಲಸ ವಹಿಸಿಕೊಂಡಿದ್ದ M/s ವೆಲ್ಟೆಕ್ ಎಂಜಿನಿಯರಿಂಗ್ ಕಂಪನಿಯು ಯಾವುದೇ ಮುಂಜಾಗ್ರತೆ ವಹಿಸದೇ ಕೆಲಸಗಾರರಿಂದ ಕಟ್ಟಡ ಕೆಡವುವ ಕೆಲಸವನ್ನು ಮಾಡಿಸಿದ್ದೇ ಕಾರಣ ಎಂದು ಅದಾನಿ ಕಂಪೆನಿಯ ಎಚ್.ಆರ್ ಮ್ಯಾನೇಜರ್ ಹರಿ ಪ್ರಸಾದ್ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.