ಕಾಪು: ಆರ್ಸಿಬಿ ವಿರುದ್ದ ಪೋಸ್ಟ್ : ಯುವಕನಿಗೆ ತಂಡದಿಂದ ಹಲ್ಲೆ-ಜೀವ ಬೆದರಿಕೆ
ಕಾಪು ಮೇ 29(ಉಡುಪಿ ಟೈಮ್ಸ್ ವರದಿ): ಐಪಿಎಲ್ ಮ್ಯಾಚ್ ಕುರಿತಾಗಿ ಗೆದ್ದ ಟೀಮ್ನ ಅಭಿಮಾನಿ ಯುವಕನೋರ್ವ ಆರ್.ಸಿ.ಬಿ ಕುರಿತು ಟ್ರೋಲ್ ಆಗಿರುವ ಪೋಸ್ಟ್ನ್ನು ವಾಟ್ಸ್ ಆ್ಯಪ್ ನಲ್ಲಿ ಸ್ಟೇಟಸ್ ಹಾಕಿಕೊಂಡ ಪರಿಣಾಮ ಯುವಕನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಕಾಪು ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಮಲ್ಲಾರು ಗ್ರಾಮದ ವರ್ಷಿತ್ ಪೂಜಾರಿ ಅವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಇವರು ಸಿಎಸ್ಕೆ ಕ್ರೀಕೆಟ್ ಟೀಮ್ ಗೆದ್ದಿದ್ದ ಬಗ್ಗೆ ತನ್ನ ವಾಟ್ಸಪ್ನಲ್ಲಿ ಸ್ಟೇಟಸ್ನಲ್ಲಿ ಪೋಸ್ಟ್ ಹಾಕಿದ್ದರು. ಈ ವಿಚಾರವಾಗಿ ರಾಘವೇಂದ್ರ ಎಂಬಾತ ವರ್ಷಿತ್ ಅವರಿಗೆ ಕರೆ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದನು. ಬಳಿಕ ವರ್ಷಿತ್ ಅವರು ಆರ್ಸಿಬಿ ಟೀಮ್ನ್ನು ಟ್ರೋಲ್ ಮಾಡಿ ತನ್ನ ವಾಟ್ಸಪ್ ಸ್ಟೇಟಸ್ಗೆ ಹಾಕಿದ್ದು, ಇದಕ್ಕೂ ಆತ ಆಕ್ಷೇಪಿಸಿದ್ದನು. ಅಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ಹಾಗೂ ಅರೋಪಿತ ಸೂಚಿಸಿದಂತೆ ಮೇ 26 ರಂದು ವರ್ಷಿತ್ ಅವರು ಗ್ರೌಂಡ್ಗೆ ಹೋದಾಗ ರಾಘವೇಂದ್ರನು ಸುಧೀರ ಹಾಗೂ ಮತ್ತೊಬ್ಬನೊಂದಿಗೆ ಬಂದು, ಆರ್ಸಿಬಿ ಟೀಮ್ ವಿರುದ್ಧ ವಾಟ್ಸಪ್ನಲ್ಲಿ ಸ್ಟೇಟಸ್ ಹಾಕಿದ ಬಗ್ಗೆ ಬೈದು ಹಲ್ಲೆ ಮಾಡಿದ್ದು ಅಲ್ಲದೆ ಹಲ್ಲೆ ಬಿಡಿಸಲು ಗ್ರೌಂಡ್ನಲ್ಲಿ ಆಟವಾಡಲು ಬಂದಿದ್ದ ಸ್ವರೂಪ್, ವಿಕ್ಕಿ ಮತ್ತಿತರರು ಬಂದಾಗ ರಾಘವೇಂದ್ರನು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾನೆ ಎಂಬುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.