ಉಡುಪಿ ಬಿಜೆಪಿ ಅಧ್ಯಕ್ಷರಿಂದ ಮಹಿಳೆಯರಿಗೆ ಅವಮಾನ: ಗೀತಾ ವಾಗ್ಳೆ ಆಕ್ರೋಶ
ಉಡುಪಿ: ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಐದು ಗ್ಯಾರಂಟಿಗಳನ್ನು ಕೂಡಲೇ ಜಾರಿಗೆ ತರಬೇಕು.ಇಲ್ಲದಿದ್ದಲ್ಲಿ ಜಿಲ್ಲಾ ಬಿಜೆಪಿ ಉಗ್ರ ಪ್ರತಿಭಟನೆಯನ್ನು ಮಾಡಲಿದೆ ಎಂದು ಹೇಳಿಕೆ ನೀಡಿರುವ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರು ಆರೆಸ್ಸೆಸ್ ಬ್ಯಾನ್ ಮಾಡುವ ಬಗ್ಗೆ ಮಾತನಾಡುತ್ತಾ ನಾವೇನೂ ಬಳೆ ತೊಟ್ಟುಕೊಂಡು ಕುಳಿತಿಲ್ಲ ಎಂದಿದ್ದಾರೆ.
ಇದು ಬಿಜೆಪಿಯವರಿಗೆ ಮಹಿಳೆಯರ ಬಗ್ಗೆ ಇರುವ ಅಗೌರವವನ್ನು ಪ್ರತಿಬಿಂಬಿಸುತ್ತದೆ. ಈ ರೀತಿಯ ಹೇಳಿಕೆಗಳನ್ನು ಕೊಡುವುದರ ಮೂಲಕ ಕುಯಿಲಾಡಿಯವರು ಇಡೀ ಮಹಿಳಾ ಕುಲಕ್ಕೇ ಅವಮಾನ ಮಾಡಿದ್ದಾರೆಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳೆ ಅನ್ನುವುದು ನಮ್ಮ ಪವಿತ್ರ ಹಿಂದೂ ಸಂಸ್ಕೃತಿಯ ಪ್ರತೀಕವಾಗಿದ್ದು,ಮಹಿಳೆಯರು ಕೈಗಳಿಗೆ ಬಳೆಗಳನ್ನು ತೊಡುವುದರಿಂದ ಮಹಿಳೆಯರ ಮುಖದ ತೇಜಸ್ಸು ಹೆಚ್ಚುವುದರೊಂದಿಗೆ ಆಕೆಗೆ ವಿಶೇಷವಾದ ಗೌರವವನ್ನು ತಂದುಕೊಡುತ್ತದೆ. ಬಳೆ ಆಕೆಯ ಶಕ್ತಿಯ ಸಂಕೇತವೇ ಹೊರತು ದೌರ್ಬಲ್ಯದ ಸಂಕೇತವಲ್ಲ. ಮಾತೆತ್ತಿದರೆ ಸಂಸ್ಕಾರ, ಸಂಸ್ಕೃತಿಯೆನ್ನುವ ಬಿಜೆಪಿಯವರಿಗೆ ಮಹಿಳೆಯರ ಬಳೆಯ ಮಹತ್ವ ತಿಳಿಯದೇ ಹೋಗಿದ್ದು ವಿಷಾದದ ಸಂಗತಿ.
ಹಿಂದೂ ಧರ್ಮ ಉಳಿದದ್ದೇ ತಮ್ಮಿಂದ ಎನ್ನುವ ಭ್ರಮೆಯಲ್ಲಿರುವ ಬಿಜೆಪಿಯವರ ಬಾಯಿಯಿಂದ ಇಂತಹ ಮಾತುಗಳು ಶೋಭೆ ತರುವುದಿಲ್ಲ ಎಂದವರು ಹೇಳಿದ್ದಾರೆ. ಬಿಜೆಪಿಯವರ ಮನೆಯಲ್ಲೂ ಅವರ ಪತ್ನಿ, ಸಹೋದರಿಯರು, ಎಲ್ಲಕ್ಕಿಂತ ಹೆಚ್ಚಾಗಿ ತಾಯಿ ಇದ್ದೇ ಇರುತ್ತಾರೆ. ಅವರೂ ಕೈಯಲ್ಲಿ ಬಳೆ ತೊಡುತ್ತಾರೆ. ಹಾಗಿದ್ರೆ ಅವರನ್ನೂ ಇದೇ ರೀತಿ ಕೀಳು ದೃಷ್ಟಿಯಿಂದ ನೋಡುತ್ತಾರೆಯೇ?ಯಥಾ ರಾಜ ತಥಾ ಪ್ರಜಾ ಅನ್ನುವಂತೆ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಹಿಳೆಯರನ್ನು ಯಾವ ದೃಷ್ಟಿಯಿಂದ ನೋಡುತ್ತಿದೆ ಅನ್ನುವುದಕ್ಕೆ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನಾ ನಿರತರಾಗಿದ್ದ ಮಹಿಳಾ ಕುಸ್ತಿ ಪಟುಗಳೊಂದಿಗೆ ನಡೆದುಕೊಂಡ ರೀತಿ ಹಾಗೂ ಸಂಸತ್ ಭವನದ ಉದ್ಘಾಟನೆ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ನಡೆಸಿಕೊಂಡ ರೀತಿಯಲ್ಲೇ ಗೊತ್ತಾಗುತ್ತೆ.
ದೇಶಕ್ಕೆ ಕೀರ್ತಿ ತಂದುಕೊಟ್ಟಿದ್ದ ಮಹಿಳಾ ಕುಸ್ತಿಪಟುಗಳೊಂದಿಗೆ ಮೃಗೀಯ ವರ್ತನೆ ತೋರಿದ ಸಂಸದ ಬೃಜಭೂಷಣ್ ಚರಣ್ ಸಿಂಗ್ ಯಾವುದೇ ಎಗ್ಗಿಲ್ಲದೆ ತಿರುಗಾಡುತ್ತಿದ್ದು, ಯಾವುದೇ ತಪ್ಪನ್ನು ಮಾಡದ ಮಹಿಳಾ ಕುಸ್ತಿ ಪಟುಗಳ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ. ಈ ಘಟನೆಯ ಬಗ್ಗೆ ಚಕಾರವೆತ್ತದ ಬಿಜೆಪಿಯ ಸ್ಥಳೀಯ ನಾಯಕರು ಗ್ಯಾರಂಟಿ ಕಾರ್ಡ್ ನ ಬೆನ್ನು ಹಿಡಿದಿದ್ದಾರೆ.
ಇಷ್ಟು ದೊಡ್ಡ ಯೋಜನೆಗಳನ್ನು ಜಾರಿಗೆ ತರಬೇಕಾದರೆ ಯಾವುದೇ ಸರ್ಕಾರಕ್ಕೂ ಕನಿಷ್ಠ ಪಕ್ಷ ಒಂದು ತಿಂಗಳಾದರೂ ಬೇಡವೇ? ಕೇವಲ ಒಂದು ವಾರದ ಹಿಂದೆಯಷ್ಟೇ ಅಧಿಕಾರಕ್ಕೆ ಬಂದಿರುವ ಸರ್ಕಾರಕ್ಕೆ ಈ ರೀತಿಯ ಬೆದರಿಕೆ ಒಡ್ಡುತ್ತಿರುವುದನ್ನು ನೋಡಿದರೆ ಬಿಜೆಪಿ ತನಗಾದ ಸೋಲಿನಿಂದ ಕಂಗೆಟ್ಟು ಹೋಗಿರುವುದು, ಹಲ್ಲು ಕಿತ್ತ ಹಾವಿನಂತಾಗಿರುವುದು ಸ್ಪಷ್ಟವಾಗುತ್ತಿದೆ.
2014ರಲ್ಲಿ ಕೇಂದ್ರದಲ್ಲಿನ ಬಿಜೆಪಿ ಸರಕಾರವು ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಯಾವುದೇ ವಾಗ್ದಾನಗಳನ್ನು ಪೂರ್ಣಗೊಳಿಸದೇ ಮುಗ್ಧ ಮತದಾರರನ್ನು ವಂಚಿಸಿದೆ. ಅಗತ್ಯವಸ್ತುಗಳ ಬೆಲೆಗಳನ್ನು ಇಳಿಸುವುದು, ಜನಧನ್ ಖಾತೆಗಳಿಗೆ ಹಣ ಹಾಕುವುದು, ವಿವಾಹವಾಗುವ ಹೆಣ್ಣು ಮಕ್ಕಳಿಗೆ 3 ಗ್ರಾಂ ಚಿನ್ನದ ತಾಳಿ ನೀಡುವುದು, ಪ್ರತೀ ವರ್ಷ 2ಕೋಟಿ ಉದ್ಯೋಗ ನೀಡುವುದು, 2022ರ ವೇಳೆಗೆ ಪ್ರತೀ ಹಳ್ಳಿಗಳಲ್ಲೂ ಬಡವರಿಗೆ ಮನೆ, ಮನೆಗೊಂದು ನಳ್ಳಿ, ನಳ್ಳಿಯಲ್ಲಿ ನೀರು(ಹರ್ ಗಾಂವ್ ಮೇ ಪಕ್ಕಾ ಘರ್,ಘರ್ ಮೇ ನಲ್,ನಲ್ ಮೇ ಜಲ್)ಎಂದೆಲ್ಲಾ ಭರವಸೆಗಳು ಎಲ್ಲಿಗೆ ಹೋದವು?
ಮಾನ್ಯ ಬಿಜೆಪಿ ಅಧ್ಯಕ್ಷರೇ, ನಾವೆಲ್ಲಾ ನೀವು ನೀಡಿರುವ ಭರವಸೆಗಳಿಗೆ ಒಂಭತ್ತು ವರ್ಷಗಳಿಂದ ಕಾಯುತ್ತಿದ್ದೇವೆ. ನೀವು ಒಂದು ತಿಂಗಳೂ ಕಾಯಲಾಗುವುದಿಲ್ಲವೇ? ಸರ್ಕಾರಿ ಬಸ್ ಗಳಲ್ಲಿ ಟಿಕೆಟ್ ತೆಗೆದುಕೊಳ್ಳಬೇಡಿ, ವಿದ್ಯುತ್ ಬಿಲ್ ಕಟ್ಟಬೇಡಿ. ಯಾರಾದರೂ ಕೇಳಿದರೆ ಉಡುಪಿ ಬಿಜೆಪಿಯವರಿಗೆ ತಿಳಿಸಿ, ನಿಮ್ಮ ಬೆಂಬಲಕ್ಕೆ ನಾವು ನಿಲ್ಲುತ್ತೇವೆ ಎಂದಿರಲ್ಲವೇ? ನಿಮ್ಮ ಬೆಂಬಲ ಜನರನ್ನು ಕೆರಳಿಸುವ ಮೂಲಕ ಗಲಾಟೆ ಮಾಡುವುದೇ? ನಮ್ಮ ಮತದಾರರು ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಗ್ಯಾರಂಟಿ ಜಾರಿ ಮಾಡಿದರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಚುನಾವಣೆಗೆ ಮೊದಲು ಹೇಳಿದವರು ನೀವೇ ಅಲ್ಲವೇ?ಹಾಗಾದ್ರೆ ಈಗ ಗ್ಯಾರಂಟಿ ಜಾರಿಗೆ ತರಲು ಈ ತೆರನಾದ ಅವಸರ ಯಾಕೆ ಅಧ್ಯಕ್ಷರೇ?ಯಾವಾಗಲೂ ನಾಲಿಗೆ ಶುದ್ಧವಾಗಿರಬೇಕು. ಬೇಕಾ ಬಿಟ್ಟಿ ಅದನ್ನು ಬಿಟ್ಟು ಬಿಟ್ಟರೆ ಯಾರೂ ನಂಬುವುದಿಲ್ಲ. ನಮ್ಮ ಗ್ಯಾರಂಟಿ ಬಿಜೆಪಿ ಪಕ್ಷದ ಗ್ಯಾರಂಟಿ ಅಲ್ಲ. ಇಂದಲ್ಲ ನಾಳೆ ಅದರ ಲಾಭ ಜನರಿಗೆ ಸಿಕ್ಕೇ ಸಿಗುತ್ತದೆ. ಅದರ ಬಗ್ಗೆ ನೀವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಭರವಸೆಗಳನ್ನು ಈಡೇರಿಸಲು ಇನ್ನುಳಿದ ಒಂದು ವರ್ಷದಲ್ಲಿ ಎಷ್ಟು ಸಾಧ್ಯವೋ ಅಷ್ಟು ಹೋರಾಟ ನಡೆಸಿ. ಹಾಗೂ ನಿಮ್ಮ ತಲೆಬೋಳಿಸಿಕೊಳ್ಳಲು ಸಿದ್ಧರಾಗಿರಿ. ಅದು ಬಿಟ್ಟು ಸಮಾಜದ ಶಾಂತಿ ಕದಡುವ ಪ್ರಯತ್ನವನ್ನು ಬಿಟ್ಟು ಬಿಡಿ . ಹಾಗೂ ಮಹಿಳೆಯರು ಮತ್ತು ಅವರು ಧರಿಸುವ ಪವಿತ್ರ ಮಂಗಲ ದ್ರವ್ಯಗಳನ್ನು ಗೌರವಿಸುವುದನ್ನು ಕಲಿತುಕೊಳ್ಳಿ.ಎಂದು ಗೀತಾ ವಾಗ್ಳೆ ಅವರು ಕುಟುಕಿದ್ದಾರೆ.