ಉದ್ಯಾವರ: 157 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ವಿತರಣೆ
ಉದ್ಯಾವರ: ಗ್ರಾ.ಪಂ. ಸದಸ್ಯ ಯೋಗೀಶ್ ಕೋಟ್ಯಾನ್ ಅವರಿಂದ 157 ವಿದ್ಯಾರ್ಥಿಗಳಿಗೆ ಸುಮಾರು 1.50 ಲಕ್ಷ ರೂ.ಗೂ ಅಧಿಕ ಮೌಲ್ಯದ ಪುಸ್ತಕ, ಸ್ಕೂಲ್ ಬ್ಯಾಗ್ ಸಹಿತ ಶೈಕ್ಷಣಿಕ ಪರಿಕರಗಳನ್ನು ಅರ್ಹ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಉದ್ಯಾವರ ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಭಾಭವನದಲ್ಲಿ ರವಿವಾರ ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮ ಸುರೇಶ್ ಶೆಟ್ಟಿ ಪುಸ್ತಕ ವಿತರಣೆಯನ್ನು ನಡೆಸಿ ಬಳಿಕ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಆತ್ಮಸ್ಥೆರ್ಯವನ್ನು ನೀಡುತ್ತಿರುವ, ಬಡತನದ ಬೇಗೆಯನ್ನು ಅನುಭವಿಸಿ ಅರಿತಿರುವ ಯೋಗೀಶ್ ಕೋಟ್ಯಾನ್ ಅವರ ಶೈಕ್ಷಣಿಕ ಸೇವೆಯು ಮಾದರಿಯಾಗಿದೆ. ಅದರ ಸದುಪಯೋಗ ಪಡಿಸಿಕೊಂಡು ಸಂಸ್ಕಾರ, ಮೌಲ್ಯಾಧಾರಿತ ಶಿಕ್ಷಣದ ಮೂಲಕ ಮಕ್ಕಳು ಸಮಾಜದ ಆಸ್ತಿಯಾಗಬೇಕು. ಇಂತಹ ಶೈಕ್ಷಣಿಕ ಸೇವೆಯು ಮಾದರಿ ಕಾಪುವಾಗುವಲ್ಲಿ ಕೊಡುಗೆ ಆಗಲಿದ್ದು, ಸುಖ ಶಾಂತಿ ನೆಮ್ಮದಿಗೆ ಭಂಗ ಬಾರದ ರೀತಿಯಲ್ಲಿಕಾಪುವಿನ ಸಮಗ್ರ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸಿಕೊಂಡು ಶಾಸಕನಾಗಿ ಕಾರ್ಯೋನ್ಮುಖನಾಗುತ್ತೇನೆ ಎ೦ದರು.
ಶೈಕ್ಷಣಿಕ ಪರಿಕರಗಳ ದಾನಿ, ಗ್ರಾ.ಪಂ. ಸದಸ್ಯ ಯೋಗೀಶ್ ಕೋಟ್ಯಾನ್ ಮಾತನಾಡಿ, ಬಡತನದ ಬೇಗೆಯಲ್ಲಿ ಬೆಳೆದುಬಂದಿದ್ದು, ಇಂದಿನ ವಿದ್ಯಾರ್ಥಿಗಳ ಶೈಕ್ಷಣಿಕ ಹಾದಿ ಸುಗಮವಾಗಿರಲಿ. ಶೈಕ್ಷಣಿಕ ಸಾಧಕರಾಗಿ ಊರಿಗೆ, ಹೆತ್ತವರಿಗೆ ಕೀರ್ತಿ ತರುವಂತೆ ಆಗಲಿ ಎಂದು ಹಾರೈಸಿದರು.
ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಾದ ಮಾನ್ಯ ಸಂಪಿಗೆನಗರ, ರಿಯಾ ಕಲಾಯಿಬೈಲ್, ದೀಪ್ತಿ ವಿ. ಜತ್ತನ್ ಪಿತ್ರೋಡಿ, ಅನೆಟ್ಟಾ ಸೆರೇನಾ ಅವರನ್ನು ಸಮಾನಿಸಿ ಅಭಿನಂದಿಸಲಾಯಿತು. ಭರತನಾಟ್ಯ, ಜೂನಿಯರ್ ಗ್ರೇಡ್ನಲ್ಲಿ 96.25ರ ಸಾಧನೆಯ ಮೂಲಕ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾದ ನಟರಾಜ ಶಿರೋಮಣಿ ಮಾನ್ಸಿ ಕೆ. ಮಲ್ಪೆ ಅವರನ್ನು ಸಮ್ಮಾನಿಸಲಾಯಿತು.
ನೂತನ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಬಳ್ಳಾರಿ ಕಾರ್ಪೋರೇಟರ್ ಶ್ರೀನಿವಾಸ್ ರೆಡ್ಡಿ ಉದ್ಯಾವರ ಗ್ರಾ.ಪಂ. ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್, ಸದಸ್ಯ ರಾಜೇಶ್ ಕುಂದರ್, ಜಯಲಕ್ಷ್ಮೀ ಸಿಲ್ಕ್ ಮಾಲಕ ರವೀಂದ ಹೆಗ್ಡೆ,ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯ ಸಂತೋಷ್ ಕುಮಾರ್, ಸಂಗಮ ಸೇವಾ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಕುಮಾರ್, ಬಿಜೆಪಿ ಉದ್ಯಾವರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಕೋಟ್ಯಾನ್, ಉದ್ಯಮಿ ಸೌಂದರ್ಯ ಹರೀಶ್ ಕುಮಾರ್, ಫ್ರೆಂಡ್ಸ್ ಗಾರ್ಡನ್ ಅಧ್ಯಕ್ಷ ಪ್ರದೀಪ್ ಸುವರ್ಣ, ಲಾವಣ್ಯ ಯೋಗೀಶ್ ಕೋಟ್ಯಾನ್ ವೇದಿಕೆಯಲ್ಲಿದ್ದರು. ದಿನೇಶ್ ಜತ್ತನ್ ಸ್ವಾಗತಿಸಿ, ನಿರೂಪಿಸಿದರು. ಮುರಳೀಧರ ಸಾಲ್ಯಾನ್ ವಂದಿಸಿದರು