ನೀತಿ ಸಂಹಿತೆ ಉಲ್ಲಂಘನೆ- ಕಾಪು ಬಿಜೆಪಿ ಅಧ್ಯಕ್ಷನ ವಿರುದ್ಧ ದೂರು
ಪಡುಬಿದ್ರೆ, ಎ.17(ಉಡುಪಿ ಟೈಮ್ಸ್ ವರದಿ): ವಿಧಾನ ಸಭಾ ಚುನಾವಣೆಯ ಹೊಸ್ತಿಲಲ್ಲಿ ನೀತಿ ಸಂಹಿತೆ ಉಲ್ಲಂಘಿಸಿರುವುದಾಗಿ ಕಾಪು ತಾಲೂಕಿನ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್ ವಿರುದ್ಧ ಪಡುಬಿದ್ರೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಿಲ್ಲಾಧಿಕಾರಿಗಳ ಕಛೇರಿಯ ಚುನಾವಣಾ ವಿಭಾಗದಿಂದ ಕಾಪು ವಿಧಾನಸಭಾ ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್ ನ 3 ನೇ ತಂಡದ ಅಧಿಕಾರಿ ಮುಸ್ತಾಫ್ ರವರಿಗೆ ಬಂದ ದೂರಿನ ಮೇರೆಗೆ ಈ ದೂರು ದಾಖಲಿಸಿಕೊಳ್ಳಲಾಗಿದೆ.
ಕಾಪುವಿನ ಬಡಾ ಗ್ರಾಮದ ಉಚ್ಚಿಲದಲ್ಲಿರುವ ಮಾಧವ ಮಂಗಳ ಸಭಾಭವನದ ಮೊಗವೀರ ಭವನದಲ್ಲಿ ಬಿಜೆಪಿ ಪರವಾಗಿ ಆಯೋಜಿಸಿದ ಸಭೆಯಲ್ಲಿ ಕಾಪು ತಾಲೂಕಿನ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್ ರವರು ಯಾವುದೇ ಅನುಮತಿ ಪಡೆಯದೇ ಸುಮಾರು100 ಜನರಿಗೆ ಉಪಹಾರ ವಿತರಿಸಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹಾಗೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನೀಡಿದ ವರದಿಯ ಆಧಾರದ ಮೇಲೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.