ಕೊಲ್ಲೂರು: ಅಕ್ರಮ ಜಾನುವಾರು ಸಾಗಾಟ-ರಿಕ್ಷಾ ಚಾಲಕನಿಂದ ದೂರು
ಕೊಲ್ಲೂರು ಫೆ.22 (ಉಡುಪಿ ಟೈಮ್ಸ್ ವರದಿ) : ಜಡ್ಕಲ್ ಗ್ರಾಮದಲ್ಲಿ ಅಕ್ರಮ ಜಾನುವಾರು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ರಿಕ್ಷಾ ಚಾಲಕರೊಬ್ಬರು ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೈಂದೂರಿನ ಜಡ್ಕಲ್ ಗ್ರಾಮದ ಪ್ರವೀಣ ಶೆಟ್ಟಿ ಅವರು ಫೆ.2 ರಂದು ವೆಳಗ್ಗಿನ ಜಾವ ವಂಡ್ಸೆಯಲ್ಲಿ ಬಾಡಿಗೆ ಪ್ರಯಾಣಿಕರನ್ನು ಬಿಟ್ಟು ತಮ್ಮ ರಿಕ್ಷಾದಲ್ಲಿ ಸ್ನೇಹಿತ ನಾರಾಯಣ ಎಂಬವರ ಜೂತೆಯಲ್ಲಿ ವಾಪಸ್ಸು ಹೋಗುತ್ತಿದ್ದರು. ಈ ವೇಳೆ ಜಡ್ಕಲ್ ಗ್ರಾಮದ ಜಡ್ಕಲ್ ಸುಪರ್ ಮಾರ್ಕೆಟ್ ಎದುರು ಮಲಗಿದ್ದ ಜಾನುವಾರುಗಳನ್ನು ಕಳವು ಮಾಡಿಕೊಂಡು ಹೋಗಲು ಕಾರೊಂದಕ್ಕೆ ಇಬ್ಬರು ಅಪರಿಚಿತ ವ್ಯಕ್ತಿಗಳು ಜಾನುವಾರನ್ನು ತುಂಬಿಸಲು ಪ್ರಯತ್ನಿಸುತ್ತಿದ್ದನ್ನು ನೋಡಿ ರಿಕ್ಷಾ ನಿಲ್ಲಿಸಿ ಅವರ ಹತ್ತಿರಕ್ಕೆ ಹೋಗಿದ್ದರು. ಈ ವೇಳೆ ಅಪಾದಿತರು ಇವರಿಗೆ ಕೊಲೆ ಬೆದರಿಕೆ ಹಾಕಿದ್ದು, ಗಾಬರಿಗೊಂಡ ಪ್ರವೀಣ ಶೆಟ್ಟಿ ಹಾಗೂ ಅವರ ಸ್ನೇಹಿತ ಹಿಂದಕ್ಕೆ ಹೋಗಿದ್ದಾರೆ. ಈ ಸಂದರ್ಭ ಅಪಾದಿತರು ಬಲವಂತವಾಗಿ ಅಲ್ಲಿ ಮಲಗಿದ ಒಂದು ಜಾನುವಾರನ್ನು ಹಿಡಿದುಕೊಂಡು ಪರಾರಿಯಾಗಿದ್ದಾರೆ. ಅದರಂತೆ ಜಾನುವಾರುಗಳನ್ನು ಹತ್ಯೆ ಮಾಡಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಆರೋಪಿಗಳು ಜಾನುವಾರನ್ನು ಕಳವು ಮಾಡಿಕೊಂಡು ಸಾಗಟ ಮಾಡಿರುವುದಾಗಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.