ತುಳು ದೈವ ಭಾಷೆ ಎಂಬ ಖಾದರ್ ಹೇಳಿಕೆಗೆ ಅವಮಾನ-ಸಚಿವ ಮಾಧುಸ್ವಾಮಿ ಕ್ಷಮೆಯಾಚಿಸಲು ಆಗ್ರಹ
ಉಡುಪಿ ಫೆ.17 (ಉಡುಪಿ ಟೈಮ್ಸ್ ವರದಿ) : ತುಳು ಭಾಷೆಯನ್ನ ದೈವಭಾಷೆ ಎಂದ ಶಾಸಕ ಯು.ಟಿ ಖಾದರ್ ಅವರ ಹೇಳಿಕೆಗೆ ಕೊಂಕು ಮಾತನಾಡಿದ ಸಚಿವ ಮಾಧುಸ್ವಾಮಿ ಅವರಿಂದ ಕ್ಷಮೆಯಾಚಿಸಬೇಕು ಎಂಬ ಆಗ್ರಹ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದ ಬಳಕೆದರರೊಬ್ಬರು ತಮ್ಮ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು ಬಿಜೆಪಿಯ ಕರಾವಳಿಯ ಶಾಸಕರು ಮತ್ತು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬ್ಯಾರಿ ಭಾಷಿಗ ಶಾಸಕ ಯೂ.ಟಿ ಖಾದರ್ ಅವರು ತುಳುವನ್ನ ದೈವಭಾಷೆ ಅಂದಾಗ ಅದಕ್ಕೆ ಕೊಂಕು ಮಾತಾಡಿದ ಮಾಧುಸ್ವಾಮಿ ಅವರನ್ನ ತರಾಟೆಗೆ ತೆಗೆದುಕೊಳ್ಳದ ನಿಮ್ಮ ಅಭಿಮಾನ ಸತ್ತು ಹೋಗಿದೆಯಾ? ಎಂದು ಕರಾವಳಿಯ ಶಾಸಕರನ್ನು ಪ್ರಶ್ನಿಸಿದ್ದಾರೆ. ಹಾಗೂ ಮಾಧುಸ್ವಾಮಿ ಬಿಜೆಪಿಗರೇ ಆಗಿರಲಿ ತನ್ನ ಮಾತೃಭಾಷೆಗೆ ಅವಮಾನ ಆದಾಗ ವಿರೋಧಿಸದ ನೀವುಗಳು ಆ ವ್ಯಕ್ತಿಯಿಂದ ಬಹಿರಂಗ ಕ್ಷಮೆ ಕೇಳಿಸದಿದ್ದರೆ ನೀವು ನಮ್ಮ ತುಳುನಾಡಿನ ಪ್ರತಿನಿಧಿಗಳೇ ಅಲ್ಲ. ಕನ್ನಡ ರಾಜ್ಯಭಾಷೆ ನಮಗೂ ಗೌರವ ಇದೆ ಹಾಗಂತಾ ನಮ್ಮ ಮಾತೃ ಭಾಷೆಯ ಬಗ್ಗೆ ಕೊಂಕು ನುಡಿಯಲು ಯಾವೊಬ್ಬನಿಗೂ ಅಧಿಕಾರವಿಲ್ಲ ಎಂದಿದ್ದಾರೆ.
ಹಾಗೂ ಖಾದರ್ ಅವರು ರಾಜಕೀಯ ಕಾರಣಕ್ಕೇ ಉಲ್ಲೇಖಿಸಿರಬಹುದು ಆದರೆ ವಿಷಯ ನಿಜ ಅಲ್ವಾ ? ಸಾವಿರಾರು ವರ್ಷ ಇತಿಹಾಸ ಇರೋ ಪಾರ್ದನಗಳು ತುಳುವಲ್ಲೇ ಇರೋದು ಕನ್ನಡದಲ್ಲಿ ಇಲ್ಲ ತಾನೇ ? ದೈವದ ನುಡಿ ಮದಿಪುಗಳೆಲ್ಲಾ ತುಳುವಲ್ಲೇ ನಡೆಯೋದು ಇಷ್ಟೆಲ್ಲಾ ಅರಿವಿರುವ ನೀವು ಆದಷ್ಟು ಬೇಗ ಮಾಧುಸ್ವಾಮಿಯಿಂದ ಕ್ಷಮೆ ಕೇಳಿಸಲೇಬೇಕು ಎಂದು ಆಗ್ರಹಿಸಿದ್ದಾರೆ.