ಕಾರ್ಕಳ: ಶಾಲಾ ಮುಖ್ಯ ಶಿಕ್ಷಕಿ ಕರ್ತವ್ಯಕ್ಕೆ ಅಡ್ಡಿ-ದೂರು ದಾಖಲು
ಕಾರ್ಕಳ ಜ.31 (ಉಡುಪಿ ಟೈಮ್ಸ್ ವರದಿ): ಕ್ಷುಲ್ಲಕ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿ ಕಾರ್ಕಳದ ದುರ್ಗಾ ಗ್ರಾಮದ, ತೆಳ್ಳಾರ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮಲತಾ ಅವರು ಚಂದಪ್ಪ ಮೂಲ್ಯ ಎಂಬಾತನ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜ.27 ರಂದು ಶಾಲೆಗೆ ಸ್ಥಳೀಯ ರಜೆ ಇದ್ದರೂ ಪ್ರೇಮಲತಾ ಅವರು ಇಲಾಖೆಯ ಸೂಚನೆ ಮೇರೆಗೆ ಮಧ್ಯಾಹ್ನ 3:00 ಗಂಟೆಗೆ ಕರ್ತವ್ಯಕ್ಕೆ ತೆರಳಿದ್ದರು. ಈ ವೇಳೆ ಶಾಲೆಯ ಆವರಣದಲ್ಲಿದ್ದ ಅಪಾದಿತ ಚಂದಪ್ಪ ಮೂಲ್ಯ ಎಂಬಾತನು ಪ್ರೇಮಲತಾ ಅವರಿಗೆ ಅವಾಚ್ಯವಾಗಿ ಬೈದು, ಹಲ್ಲೆ ಮಾಡಿ, ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಸರಕಾರಿ ಕರ್ತವ್ಯಕ್ಕೆ ಅಡ್ಡಪಡಿಸಿದ್ದಾನೆ ಎಂಬುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.