ಸಂಸ್ಕಾರದ ಅರಿವಿನಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ: ವಿಜಯ ಕೊಡವೂರು
ಉಡುಪಿ ಜ.30 (ಉಡುಪಿ ಟೈಮ್ಸ್ ವರದಿ) : ಸಂಸ್ಕಾರದ ಅರಿವಿನಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಸ್ವಾವಲಂಬಿ ಭಾರತ – ಜಿಲ್ಲಾ ಸಮನ್ವಯಕ ಹಾಗೂ ಉಡುಪಿಯ ನಗರ ಸಭಾ ಸದಸ್ಯ ವಿಜಯ ಕೊಡವೂರು ಅವರು ತಿಳಿಸಿದರು.
ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ಹಿರಿಯಡ್ಕ ಇದರ 31ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಬೌತಿಕ್ ನ ಭಾಗವಾಗಿ ಮಾತನಾಡಿದ ಅವರು, ಶ್ರೀ ರಾಮನಂತ ಮಗ, ಲಕ್ಷ್ಮಣ – ಭರತರಂತ ತಮ್ಮಂದಿರು, ಸೀತೆಯಂತ ಪತ್ನಿ ಇದ್ದಂತಹ ನಮ್ಮ ದೇಶ, ಅಂಬೇಡ್ಕರ್, ವಿವೇಕಾನಂದ, ನಾರಾಯಣಗುರುವಿನಂತಹ ಮಹಾನ್ ವ್ಯಕ್ತಿಗಳನ್ನು ಕಂಡಂತಹ ನಮ್ಮ ದೇಶದಲ್ಲಿ ಇಂದು ಕೋಟ್ಯಂತರ ಜನ ಯಾಕೆ ನಿರ್ಗತಿಕರಾಗಿದ್ದಾರೆ ಎಂದು ಪ್ರಶ್ನಿಸಿದರು.
ಹಾಗೂ ಪ್ರತಿವರ್ಷ ಸಾವಿರಾರು ಹೆಣ್ಣು ಮಕ್ಕಳು ಕಾಣೆಯಾಗುತ್ತಿದ್ದರೆ, ಹೆತ್ತ ಪೋಷಕರು ವೃದ್ಧಾಶ್ರಮದಲ್ಲಿ ಉಳಿಯುವ ಪರಿಸ್ಥಿತಿ. ಇದೆಲ್ಲಾ ಸುಧಾರಿಸಲು, ಕೌಟುಂಬಿಕ ಹಾಗೂ ಸಮಾಜದ ಒಳಿತಿಗಾಗಿ ಮಕ್ಕಳಿಗೆ ಸಂಸ್ಕಾರದ ತಿಳುವಳಿಕೆ ಅವಶ್ಯ ಎಂದು ಹೇಳಿದರು.
ಸ್ಥಳೀಯ ಉದ್ಯಮಿ ಹಾಗೂ ಸಮಾಜ ಸೇವಕ ಅನಿಲ್ ಶೆಟ್ಟಿ ಮಾಂಬೆಟ್ಟು ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಸಿಂಹವಾಹಿನಿ ದುರ್ಗಾಪರಮೇಶ್ವರಿ ಗದ್ದಿಗೆ ಅಮ್ಮನವರ ದೇವಸ್ಥಾನ, ಶ್ರೀಕ್ಷೇತ್ರ ಗಂಪ ಇದರ ಅರ್ಚಕ ರಾಜು ನಾಯ್ಕ ಇವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಂತರ ಚೈತನ್ಯ ಕಲಾವಿದರು ಬೈಲೂರು ಇವರಿಂದ ”ವಾರ್ಡ್ ನಂಬರ್ 2″ ಎಂಬ ಹಾಸ್ಯಮಯ ತುಳು ನಾಟಕವನ್ನು ಪ್ರದರ್ಶಿಸಲಾಯಿತು.
ಈ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಇಂಜಿನಿಯರ್ ಹಾಗೂ ರೋಟರಿ ಕ್ಲಬ್ ಮಣಿಪಾಲ ಟೌನ್ ನ ನಿಕಟ ಪೂರ್ವ ಅಧ್ಯಕ್ಷ ಗಣೇಶ್ ನಾಯಕ್, ಸಂಘದ ಅಧ್ಯಕ್ಷ ದೇವದಾಸ್ ಮರಾಠೆ, ಕಾರ್ಯದರ್ಶಿ ದಿವಾಕರ ಹಿರಿಯಡ್ಕ, ರಾಮಚಂದ್ರ ನಾಯಕ್, ಬಾಲಕೃಷ್ಣ ಬಿ.ಕೆ ಉಪಸ್ಥಿತರಿದ್ದರು.