ಚಲಿಸುವ ರೈಲಿನಿಂದ ಮಗುವಿನ ಶವ ಎಸೆದ ತಾಯಿ.. ಮುಂದೇನಾಯ್ತು..?

ಜೈಪುರ ಜ.20 : ತಾನೇ ಹೆತ್ತ 3 ವರ್ಷದ ಮಗಳನ್ನು ಕೊಂದು ಮೃತದೇಹವನ್ನು ಚಲಿಸುವ ರೈಲಿನಿಂದ ಎಸೆದ ಆಘಾತಕಾರಿ ಘಟನೆ ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ನಡೆದಿದೆ.

ಇದೀಗ ಪ್ರಕರಣಕ್ಕೆ ಸಂಬಂಧಿಸಿ ವಿವಾಹಿತ ಮಹಿಳೆ ಸುನೀತಾ ಮತ್ತು ಆಕೆಯ ಪ್ರಿಯಕರ ಸನ್ನಿ ಅಲಿಯಾಸ್ ಮಾಲ್ಟಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಅಲ್ಲಿನ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಇನ್ನು 5 ಮಕ್ಕಳನ್ನು ಹೊಂದಿರುವ ಸುನೀತಾ ತನ್ನ ಪ್ರೇಮಿ ಸನ್ನಿ ಮತ್ತು ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಶಾಸ್ತ್ರಿ ನಗರದಲ್ಲಿ ವಾಸಿಸುತ್ತಿದ್ದಳು. ಆಕೆಯ ಉಳಿದ ಮೂವರು ಮಕ್ಕಳು ಆಕೆಯ ಪತಿಯೊಂದಿಗೆ ಬೇರೆ ಮನೆಯಲ್ಲಿ ವಾಸಿಸುತ್ತಿದ್ದರು. ಸೋಮವಾರ ಮಧ್ಯರಾತ್ರಿ ಮಹಿಳೆ ಪ್ರಿಯಕರನ ಸಹಾಯದಿಂದ ತನ್ನ ಮಗಳನ್ನು ಕತ್ತು ಹಿಸುಕಿ ಕೊಂದು, ಆಕೆಯ ಶವವನ್ನು ಬೆಡ್‍ಶೀಟ್‍ನಲ್ಲಿ ಸುತ್ತಿ ಶ್ರೀಗಂಗಾನಗರ ರೈಲು ನಿಲ್ದಾಣಕ್ಕೆ ಹೋಗಿದ್ದಳು. ಮರುದಿನ ಬೆಳಿಗ್ಗೆ 6.10ಕ್ಕೆ ರೈಲು ಹತ್ತಿದ ಆಕೆ ರೈಲು ಫತುಹಿ ರೈಲ್ವೆ ನಿಲ್ದಾಣಕ್ಕೂ ಮೊದಲು ಕಾಲುವೆಯ ಮೇಲಿನ ಸೇತುವೆಯನ್ನು ತಲುಪಿದಾಗ ಚಲಿಸುವ ರೈಲಿನಿಂದ ಆ ಮಗುವಿನ ಶವವನ್ನು ಇಬ್ಬರು ಎಸೆದಿದ್ದಾರೆ. ಸುನೀತಾ ತನ್ನ ಮಗಳ ಶವವನ್ನು ಕಾಲುವೆಯಲ್ಲಿ ಬಿಸಾಡಿದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂದು ಯೋಚಿಸಿದ್ದಳು. ಆದರೆ, ಚಲಿಸುವ ರೈಲಿನಿಂದ ಶವ ಬಿಸಾಡಿದ್ದರಿಂದ ಆ ಹೆಣ ಕಾಲುವೆಯ ಬದಲು ರೈಲ್ವೆ ಹಳಿಯ ಮೇಲೆ ಬಿದ್ದಿತ್ತು. ಆ ಶವವನ್ನು ನೋಡಿದ ಸ್ಥಳೀಯರು, ಪೊಲೀಸರಿಗೆ ವಿಷಯ ತಿಳಿಸಿದ್ದರು. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತ ಬಾಲಕಿಯ ಗುರುತು ಪತ್ತೆ ಹಚ್ಚಿ ಆಕೆಯ ತಾಯಿಯನ್ನು ಗುರುತಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಕೆ ತನ್ನ ಮಗಳನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡ ನಂತರ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *

error: Content is protected !!