ಪುಣ್ಯಕೋಟಿ ದತ್ತು ಯೋಜನೆ: ಸರಕಾರಿ ನೌಕರರ ವೇತನ ಕಡಿತಕ್ಕೆ ರಾಜ್ಯ ಸರ್ಕಾರ ಆದೇಶ
ಬೆಂಗಳೂರು, ನ.17 : ಪುಣ್ಯಕೋಟಿ ದತ್ತು ಯೋಜನೆ’ಯ ಸುಗಮ ಅನುಷ್ಠಾನಕ್ಕಾಗಿ ರಾಜ್ಯ ಸರಕಾರಿ ನೌಕರ ವೇತನ ಕಡಿತಕ್ಕೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಅದರಂತೆ ಈ ಯೋಜನೆಯ ಅನುಷ್ಠಾನಕ್ಕಾಗಿ ವಿವಿಧ ವೃಂದದ ರಾಜ್ಯ ಸರಕಾರಿ ನೌಕರರು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಸ್ವಾಯತ್ತ ಸಂಸ್ಥೆಗಳ ನೌಕರರ ನವೆಂಬರ್ ತಿಂಗಳ ವೇತನದಿಂದ ಒಂದು ಬಾರಿಗೆ ಸೀಮಿತವಾಗಿ ವಂತಿಗೆಯನ್ನು ಕಟಾಯಿಸಲು ಹಾಗೂ ನಿಗದಿತ ಯೋಜನೆಗೆ ಬಳಕೆ ಮಾಡಲು ಸೂಚಿಸಲಾಗಿದೆ.
ಹಾಗೂ ನೌಕರರ ವೇತನದಲ್ಲಿ ನಿಗದಿತ ವಂತಿಗೆಯನ್ನು ನವೆಂಬರ್ ತಿಂಗಳ ವೇತನದ ಬಿಲ್ಲಿನಿಂದ ಕಟಾವುಗೊಳಿಸುವ ಮೂಲಕ ವಸೂಲಿ ಮಾಡಲು ಆಯಾ ಕಚೇರಿಗಳ ಮುಖ್ಯಾಧಿಕಾರಿಗಳು ಮತ್ತು ಖಜಾನಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ವಂತಿಗೆಯನ್ನು ಕೊಡಲು ಇಚ್ಚಿಸದ ನೌಕರರು ತಮ್ಮ ಅಸಮ್ಮತಿಯನ್ನು ಸಂಬಂಧಪಟ್ಟ ಬಟವಾಡೆ ಅಧಿಕಾರಿಗಳಿಗೆ ಲಿಖಿತ ಮೂಲಕ ನ.25ರೊಳಗಾಗಿ ಸಲ್ಲಿಸಬೇಕು. ಅಂತಹ ನೌಕರರ ವೇತನದಿಂದ ನಿಗದಿತ ವಂತಿಗೆ ಕಟಾವು ಮಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇನ್ನು ‘ಎ’ ವೃಂದದ ಅಧಿಕಾರಿಗಳು-11 ಸಾವಿರ ರೂ., ‘ಬಿ’ ವೃಂದದ ಅಧಿಕಾರಿಗಳು-4 ಸಾವಿರ ರೂ., ‘ಸಿ’ ವೃಂದದ ಅಧಿಕಾರಿಗಳು-400 ರೂ.ಗಳನ್ನು ಒಂದು ಬಾರಿಗೆ ಸೀಮಿತವಾಗಿ ನೀಡಬೇಕಿದೆ. ‘ಡಿ’ ವೃಂದದ ನೌಕರರಿಗೆ ವಿನಾಯಿತಿ ನೀಡಲಾಗಿದೆ. ಸರಕಾರಿ ನೌಕರರ ವೇತನ ಬಿಲ್ಲಿನಲ್ಲಿ ಮೊತ್ತವನ್ನು ಕಟಾಯಿಸಲು ಹಾಗೂ ಮೊತ್ತವನ್ನು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಆಯುಕ್ತರಿಗೆ ಖಜಾನೆ ಅಧಿಕಾರಿಗಳು ಸಂದಾಯ ಮಾಡಲು ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ.