ನಾನು ಮಂತ್ರಿಯಾದರೆ ಸರಕಾರಿ ಕಾರು, ಎಸ್ಕಾರ್ಟ್, ಗನ್‌ಮ್ಯಾನ್ ತೆಗೆದುಕೊಳ್ಳುವುದಿಲ್ಲ- ಹಾಲಾಡಿ ಶ್ರೀನಿವಾಸ ಶೆಟ್ಟಿ

ಕುಂದಾಪುರ ಜು.29(ಉಡುಪಿ ಟೈಮ್ಸ್ ವರದಿ): ಜಾತಿವಾದಿಗಳು ಜಾತಿ ಸಂಘಕ್ಕೆ ಸಚಿವರಾಗಲಿ ಎಂದು ಜಾತಿವಾದ ರಾಜಕೀಯದ ವಿರುದ್ದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ದೂರವಾಣಿ ಮೂಲಕ ಮಾ‌ಧ್ಯಮದವರೊಂದಿಗೆ ಮಾತನಾಡಿದ‌ ಅವರು, ನನ್ನ ಹುಟ್ಟಿನಿಂದ ನಾನು ಜಾತಿ ಸಂಘಕ್ಕೆ ಹೋದವನಲ್ಲ. ಪ್ರಬಲ ಜಾತಿಯಲ್ಲಿ ಹುಟ್ಟಿದ್ದು ಆಕಸ್ಮಿಕ. ಆದರೆ ಎಲ್ಲಾ ಜಾತಿಯವರು ಮತ ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ. ಒಂದು ಜಾತಿಯ ಉದ್ದಾರಕ್ಕಾಗಿ ಜನರು ನನ್ನನ್ನು ಗೆಲ್ಲಿಸಿದ್ದಲ್ಲ. ನಾನು ಜಾತ್ಯಾತೀತ ರಾಜಕಾರಣಿ. ಜಾತಿವಾದಿಗಳು ಜಾತಿಯ ಸಂಘಕ್ಕೆ ಮಾತ್ರ ಸಚಿವರಾಗಬೇಕು. ಜಾತಿವಾದಿಗಳು ಯಾವುದೇ ಕಾರಣಕ್ಕೂ ಶಾಸಕರಾಗಬಾರದು ಎಂದರು. 

ಜಾತಿವಾದಿಗಳು ಸಾರ್ವತ್ರಿಕ ಚುನಾವಣೆಗೆ ಬರಬಾರದು. ನನ್ನಲ್ಲಿ ಯಾವುದೇ ನಾಟಕೀಯ ಮಾತುಗಳು ಇಲ್ಲ. ಉಪಯೋಗಕ್ಕೆ ಇಲ್ಲದ್ದನ್ನು ಕೊಟ್ಟರೆ ಕಿಸೆಗೆ ಹಾಕಿಕೊಂಡು ಬರುವುದಿಲ್ಲ. ಅಲ್ಲಿಯೇ ಬಿಟ್ಟು ಬರುವ ವ್ಯಕ್ತಿತ್ವ ನನ್ನದು. ಶಾಸಕರು ಹೆರಿಗೆ ಕೋಣೆಯ ದಾದಿಯ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಸಚಿವ ಸ್ಥಾನವನ್ನು ಯಾರ ಬಳಿಯೂ ಕೇಳಲು ಹೋಗುವುದಿಲ್ಲ ಎಂದ ಅವರು, ನನಗೆ ಸಚಿವ ಸ್ಥಾನ ಕೊಡಿ‌ ಎಂದು ಯಾವತ್ತೂ ನಾಯಕರ ಮುಂದೆ ನಾನು ಬೇಡಿಕೆ ಇಟ್ಟವನಲ್ಲ. ಸಚಿವ ಸ್ಥಾನ ಕೇಳಿ ಪಡೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲ. ಹಿಂದೆ ಸಚಿವ ಸ್ಥಾನ‌ ಕೊಡುತ್ತೇನೆಂದು ನನ್ನನ್ನು ಕರೆದು ತಪ್ಪು ಮಾಡಿದ್ದರು. ಆದರೆ ನಾನು ಹೆಡ್ಡ ರಾಜಕಾರಣಿ ಅಲ್ಲ. ಸಚಿವ ಸ್ಥಾನಕ್ಕಾಗಿ ಯಾರ ಕಾಲಿಗೂ ಬೀಳೋದಿಲ್ಲ‌‌ ಎಂದರು. ಇದೇ ವೇಳೆ ನನ್ನದು ನೇರನುಡಿಯ ರಾಜಕಾರಣ ಎಂದ ಅವರು, ನನ್ನ ರಾಜಕೀಯ‌ ಜೀವನದಲ್ಲಿ ಇದುವರೆಗೂ ಸ್ವಾಭಿಮಾನ ಬಿಟ್ಟಿಲ್ಲ .ರಾಜಕೀಯ ಲಾಬಿ ಜಾತಿವಾದಿತನ ನಾನು ಮಾಡುವುದಿಲ್ಲ.

ಯಾರ ಕಾಲಿಗೆ ಬಿದ್ದು ನಾನು ಕೆಲಸ ತೆಗೆದುಕೊಳ್ಳುವುದಿಲ್ಲ. ಕೆಲಸ ಕೊಟ್ಟರೆ ನಾನು ಅದನ್ನು ನಿಭಾಯಿಸುತ್ತೇನೆ. ಒಂದು ವೇಳೆ ನಾನು ಮಂತ್ರಿಯಾದರೆ ಸರಕಾರಿ ಕಾರು, ಎಸ್ಕಾರ್ಟ್, ಗನ್‌ಮ್ಯಾನ್ ತೆಗೆದುಕೊಳ್ಳುವುದಿಲ್ಲ. ಸಚಿವ ಸ್ಥಾನ ಕೊಡುವ ಬಗ್ಗೆ ನನಗೆ ಈವರೆಗೆ ಯಾವುದೇ ಕರೆಗಳು ಬಂದಿಲ್ಲ. ಕರೆ ಬಂದರೆ ನಾನು ಇದನ್ನು ಹೇಳಲು ಸಿದ್ದ ಇದ್ದೇನೆ. ಹಾಗಂತ‌ ಇದು ದುರಹಂಕಾರದ‌ ಮಾತಲ್ಲ, ನಾನು ಯಾರ ಭಯದಲ್ಲೂ ಇಲ್ಲ. ಮತದಾರರ ಮತ್ತು ಕಾರ್ಯಕರ್ತರ ಋಣದಲ್ಲಿ ನಾನಿದ್ದೇನೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!