ಬೈಂದೂರು: ಮೊಬೈಲ್ ವಿಚಾರವಾಗಿ ಗಂಡ ಹೆಂಡತಿ ಜಗಳ- ಪತ್ನಿ ಆತ್ಮಹತ್ಯೆ
ಉಡುಪಿ ಜು.29: ಪದೇ ಪದೇ ಮಕ್ಕಳಿಗೆ ಮೊಬೈಲ್ ಕೊಡುವ ವಿಚಾರಕ್ಕೆ ಪತಿಯೊಂದಿಗೆ ಜಗಳವಾಗಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ಬೈಂದೂರಿನಲ್ಲಿ ನಡೆದಿದೆ.
ಸುಶ್ಮಿತಾ ವಿಜಯ್ ಆತ್ಮಹತ್ಯೆ ಮಾಡಿಕೊಂಡವರು.ಮುಂಬಯಿಯ ಹೊಟೇಲ್’ನಲ್ಲಿ ಕೆಲಸ ಮಾಡಿಕೊಂಡಿದ್ದ ಇವರ ಪತಿ ವಿಜಯ್ ಶೆಟ್ಟಿ ಲಾಕ್ಡೌನ್ ಸಮಯದಲ್ಲಿ ಊರಿಗೆ ಬಂದಿದ್ದರು. ನಿನ್ನೆ ಮಕ್ಕಳಿಗೆ ಮೊಬೈಲ್ ಪೋನ್ ನೋಡಲು ಕೊಟ್ಟ ವಿಚಾರವಾಗಿ ಪತ್ನಿ ಸುಶ್ಮಿತಾ ಅವರು ವಿಜಯ್ ಯೊಂದಿಗೆ ಗಲಾಟೆ ಮಾಡಿದ್ದಾರೆ. ಈ ವೇಳೆ ವಿಜಯ್ ಶೆಟ್ಟಿ ತಾನು ಮುಂಬಯಿಗೆ ಹೋಗುವುದಾಗಿ ಹೇಳಿ ಬ್ಯಾಗಿಗೆ ಬಟ್ಟೆಗಳನ್ನು ಹಾಕೋದಕ್ಕೆ ಮುಂದಾಗಿದ್ದಾರೆ. ಇದನ್ನು ನೋಡಿದ ಸುಶ್ಮಿತಾ ಕೋಣೆಗೆ ಹೋಗಿ ಬೆಳಿಗ್ಗೆ 11:30 ರ ಸುಮಾರಿಗೆ ಬಾಗಿಲು ಹಾಕಿಕೊಂಡಿದ್ದಾರೆ.
ಕೆಲವು ಸಮಯ ಕಳೆದರೂ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡು ಕೋಣೆಯ ಕಿಟಕಿಯ ಗಾಜು ಒಡೆದು ನೋಡಿದ್ದಾರೆ. ಈ ವೇಳೆ ಸುಶ್ಮಿತಾ ಅವರು ಕೋಣೆಯಲ್ಲಿ ನೇಣು ಬಿಗಿದುಕೊಂಡಿರುವುದು ಕಂಡು ಬಂದಿತ್ತು. ಕೂಡಲೇ ಕೋಣೆಯ ಬಾಗಿಲು ಒಡೆದು ಸುಶ್ಮಿತಾರನ್ನು ನೇಣು ಕುಣಿಕೆಯಿಂದ ಕೆಳಗಿಳಿಸಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಕೆ.ಎಮ್.ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.