ಪಡುಬಿದ್ರಿ: ಕ್ರಿಕೆಟ್ ಮೈದಾನದಲ್ಲಿ ಹೊಯಿಕೈ
ಪಡುಬಿದ್ರಿ ಜು.6(ಉಡುಪಿ ಟೈಮ್ಸ್ ವರದಿ): ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಕ್ರಿಕೆಟ್ ಆಟಗಾರರ ನಡುವೆ ಗಲಾಟೆ ನಡೆದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ.
ಜು.5 ರಂದು ಸಂಜೆ ಕಾಪು ತಾಲೂಕಿನ ಪಲಿಮಾರು ಗ್ರಾಮದ ಹೈಸ್ಕೂಲ್ ಮೈದಾನದಲ್ಲಿ ಆದರ್ಶ ಶೆಟ್ಟಿ ಅವರು ತಮ್ಮ ಸ್ನೇಹಿತ ರೊಂದಿಗೆ ಕ್ರಿಕೆಟ್ ಆಟವಾಡುತ್ತಿದ್ದರು. ಈ ವೇಳೆ ಕರ್ನಿರೆ ಗ್ರಾಮದಿಂದ ಕೀರ್ತೇಶ್, ನಿತೇಶ್, ಅಭಿಷೇಕ್, ದಿನೇಶ್, ನಿತೇಶ್ ದೇವಾಡಿಗ, ಹಾಗೂ ರಾಜೇಶ್ ಎಂಬುವರು ಆಟವಾಡಲು ಬಂದಿದ್ದಾರೆ.
ಈ ವೇಳೆ ಆದರ್ಶ್ ಶೆಟ್ಟಿ ಅವರ ಬೌಲಿಂಗ್ ಮಾಡುವ ವಿಚಾರದಲ್ಲಿ ಆದರ್ಶ್ ಹಾಗೂ ಆಟವಾಡಲು ಬಂದವರ ನಡುವೆ ಮಾತಿಗೆ ಮಾತು ಬೆಳೆದಿದೆ. ಇದೇ ವೇಳೆ ಆ 6 ಜನ ಆರೋಪಿತರು ಆದರ್ಶ್ ಅವರಿಗೆ ಹಲ್ಲೆ ನಡೆಸಿ ಅವಾಚ್ಯವಾಗಿ ಬೈದು ನಿನ್ನನ್ನು ನೋಡಿ ಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಈ ವೇಳೆ ಗಾಯಗೊಂಡ ಆದರ್ಶ್ ಅವರನ್ನು ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.