ಅಚ್ಚಿನ ಮೊಳೆಗಳಿಂದ ಮೊಬೈಲ್ ಸ್ಕ್ರೀನ್ ವರೆಗೆ…

ಕೇಲ್ರಪ್ಪೋ ಕೇಲ್ರಿ……… ಹೀಗೆ ಹೇಳುತ್ತಾ ತಮ್ಮೂರಿನಲ್ಲಿ ನಡೆಯುವ ಅಥವಾ ನಡೆಯಲಿರುವ ಕಾರ್ಯದ ಬಗ್ಗೆ ಮಾಹಿತಿ ನೀಡುವುದನ್ನು ಹಳೇ ಸಿನಿಮಾಗಳಲ್ಲಿ ನೋಡಿದ್ದೇವೆ. ಇದು ಯಾವುದೇ ಕಾಲ್ಪನಿಕ ಸನ್ನಿವೇಶ ಅಲ್ಲ ಇದು ಆಗಿನ ವಾಸ್ತವ.‌ 
ಆಗಿನ್ನೂ ಈಗಿನಂತೆ ಪತ್ರಿಕೆಗಳು, ಟಿವಿಗಳು ಇಲ್ಲದ ಸಮಯ. ಈಗಂತೂ ಎಲ್ಲನೂ ಅಂಗೈಯಲ್ಲೇ ಮಾಹಿತಿ ಸಿಗುವ ಮಟ್ಟಿಗೆ ತಂತ್ರಜ್ಞಾನ ಬೆಳೆದಿದೆ. ಆದರೆ ಆಗಿನ ಕಾಲದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಯಾವುದೇ ವಿಷಯ ಕುರಿತು ಮಾಹಿತಿ ಮುಟ್ಟಿಸ ಬೇಕಾದರೆ ಹಲವು ಸಮಯಗಳೇ ಕಳೆಯುತ್ತಿತ್ತು. 

ಈ ಮಾತುಗಳು ಯಾಕೆ ಅಂದರೆ ಇಂದು ಪತ್ರಿಕಾ ದಿನಾಚರಣೆ. ಇಂದಿನ ವಿಶೇಷತೆ ಏನು ಯಾಕಾಗಿ ಪತ್ರಿಕಾ‌ ದಿನವನ್ನು ಆಚರಿಸುತ್ತಾರೆ ಅಂತ ಗೊತ್ತಾ. ಇಂದು ನಮ್ಮ ರಾಜ್ಯದ ಅಂದರೆ ಕನ್ನಡದ ಮೊದಲ ಪತ್ರಿಕೆ ಉಗಮವಾದ ದಿನ. ಹೌದು ಅದು 1843 ರ ಅವಧಿ, ಕನ್ನಡ ಪತ್ರಿಕೋದ್ಯಮ ಉಗಮ ಆಗಿದ್ದು ಈ ಅವಧಿಯಲ್ಲಿಯೇ.

1843 ರ ಜು.1 ರಂದು ಕನ್ನಡದ ಮೊದಲ ಪತ್ರಿಕೆ “ಮಂಗಳೂರ ಸಮಾಚಾರ”ಜರ್ಮನಿಯ ಕ್ರೈಸ್ತ ಧರ್ಮ ಪ್ರಚಾರಕ ಫ್ರೆಡ್ರಿಕ್‌ ಮೋಗ್ಲಿಂಗ್ ಅವರ ಸಂಪಾದಕತ್ವದಲ್ಲಿ ಆರಂಭವಾಗುತ್ತದೆ. ಈ ಮೂಲಕ‌ ಕನ್ನಡ ಪತ್ರಿಕೋದ್ಯಮದ ಉಗಮಕ್ಕೆ ನಾಂದಿ ಹಾಡಿದಂತಾಗಿತ್ತು. ಇದರ ನೆನಪಿಗಾಗಿ ಇಂದಿನ ದಿನವನ್ನು ರಾಜ್ಯದಲ್ಲಿ ಪತ್ರಿಕಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ನಂತರದ ದಿನಗಳಲ್ಲಿ ‌ಮಂಗಳೂರ ಸಮಾಚಾರ ಪತ್ರಿಕೆಯ ವ್ಯಾಪ್ತಿಯನ್ನು ಹೆಚ್ಚಿಸುವ ಸಲುವಾಗಿ ಈ ಪತ್ರಿಕೆಯು ಕನ್ನಡ ಸಮಾಚಾರವಾಗಿ ಬಳ್ಳಾರಿಗೆ ಸ್ಥಳಾತಂರಗೊಂಡಿತು.

ಹಲವು ಸಮಯದ ಬಳಿಕ ಅನೇಕ ಪತ್ರಿಕೆಗಳು ಆರಂಭಗೊಂಡವು. ಆರಂಭದಲ್ಲಿ ನಿಯತಕಾಲಿಕ, ಪುಸ್ತಕ ರೂಪದಲ್ಲಿ ಪ್ರಸಾರಗೊಂಡ ಪ್ರತಿಕೋದ್ಯಮ ಕ್ರಮೇಣ ದಿನ ಪತ್ರಿಕೆಯಲ್ಲಿ ರೂಪದಲ್ಲಿ ಪ್ರಸಾರಕ್ಕೆ ಮುನ್ನುಡಿ ಬರೆಯಿತು. ಸಮಾಜದ ಆಗುಹೋಗುಗಳನ್ನು ಜನರಿಗೆ ಮುಟ್ಟಿಸುವಲ್ಲಿ ಜನರ ಧ್ವನಿಯಾಗಿ, ಸಮಾಜದ ಕೈಗನ್ನಡಿಯಾಗಿ ಪತ್ರಿಕೆಗಳು ತನ್ನದೇ ಆದ ಪಾತ್ರ ವಹಿಸುತ್ತಿದೆ. ಈ ಮೂಲಕ ಇಂದು ಪತ್ರಿಕೋದ್ಯಮ ಪ್ರಜಾಪ್ರಭುತ್ವದ 4ನೇ ಅಂಗ ಎಂಬ ಮನ್ನನೆ ಪಡೆದುಕೊಂಡಿದೆ.

ಭಾರತದಲ್ಲಿ ಪತ್ರಿಕೆಗಳ ಮೂಲ ಅಂದರೆ ಮುದ್ರಣ ಪ್ರಕ್ರಿಯೆ ಆರಂಭಗೊಂಡದ್ದು ಕ್ರೈಸ್ತ ಮಿಷನರಿಗಳಿಂದ 1450 ರಲ್ಲಿ ಮುದ್ರಣ ಯಂತ್ರದ ಆವಿಷ್ಕಾರದ ಮೂಲಕ. ಅಚ್ಚಿನ ಮೊಳೆಗಳನ್ನು ಬಳಸಿ ಮುದ್ರಣ ಯಂತ್ರಕ್ಕೆ ಗುಟನ್ ಬರ್ಗ್ ನೀಡಿದ ಚಾಲನೆಯೇ ಸಂವಹನ ಕ್ರಾಂತಿಯ ಮೊದಲ ಹೆಜ್ಜೆ ಎಂದು ಹೇಳುತ್ತಾರೆ.

ಇಂದು ಪತ್ರಿಕೋದ್ಯಮದ ವ್ಯಾಪ್ತಿಯಲ್ಲಿ ಎಲ್ಲೆಡೆ ಹಬ್ಬಿದೆ. ದಿನ ಪತ್ರಿಕೆಗಳು, ವಾರ ಪತ್ರಿಕೆ, ಮಾಸಿಕ ಜೊತೆಗೆ ಡಿಜಿಟಲ್ ಪತ್ರಿಕೆಗಳೂ ಆವಿಷ್ಕಾರ ಗೊಂಡಿದೆ. ಪತ್ರಿಕೋದ್ಯಮದ ಸಿದ್ದಾಂತಗಳೊಂದಿಗೆ ಇಂದಿಗೂ ಪತ್ರಿಕೆಗಳು ವಸ್ತುನಿಷ್ಠ ಸುದ್ದಿಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಈಗಿನ ಆಧುನಿಕ ಸಮಾಜದಲ್ಲಿ ಪತ್ರಿಕೆಯ ಸ್ವರೂಪ ಬದಲಾಗಿದೆ. ಕಾಗದದ ಮೂಲಕ ಓದುಗರ ಕೈ ಸೇರುತ್ತಿದ್ದ ಪತ್ರಿಕೆ ಇಂದು ಡಿಜಿಟಲ್ ಮಾಧ್ಯಮಗಳಾಗಿ ಇ-ಪೇಪರ್ ಎಂಬ ಪರಿಕಲ್ಪನೆ ಯಲ್ಲಿ ಓದುಗರನ್ನು ಮತ್ತಷ್ಟು ಶೀಘ್ರವಾಗಿ ತಲುಪುತ್ತಿದೆ.

ಇದು ಪರಿಸರ ಸ್ನೇಹಿಯಾದ ಬದಲಾವಣೆ ಎಂಬೂದು ಹಲವರ ವಾದ. ಯಾಕೆಂದರೆ ಪತ್ರಿಕೆಗಳು ಇ- ಪೇಪರ್ ಮೂಲಕ ಶೀಘ್ರವಾಗಿ ಓದುಗರನ್ನು ತಲುಪುತ್ತದೆ ಎಂಬುದು ಒಂದೆಡೆಯಾದರೆ ಮತ್ತೊಂದೆಡೆ ಪತ್ರಿಕೆಗಳ ಮುದ್ರಣಕ್ಕೆ ಬಳಸುವ ಕಾಗದ ಬಳಕೆ ಕಡಿಮೆಯಾಗಿ ಈ ಮೂಲಕ ಕಾಗದ ಬಳಕೆಗೆ ಮರಗಳನ್ನು ಕಡಿಯುವುದು ಕಡಿಮೆಯಾಗುತ್ತದೆ ಎಂಬೂದು ಒಂದು ಕಾರಣ.

ಅದೇನೇ ಆದರೂ ಇಂದಿನ‌ ದಿನ ರಾಜ್ಯಾದ್ಯಂತ ಪತ್ರಿಕಾ ಮಿತ್ರರಿಗೆ ಸಂಭ್ರಮದ ದಿನ. ಈ ದಿನ ಪ್ರೆಸ್ ಕ್ಲಬ್ ಗಳಲ್ಲಿ ಅಥವಾ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಪತ್ರಕರ್ತರ ಸೇವೆಯನ್ನು ಸ್ಮರಿಸಲಾಗುತ್ತದೆ. ಹಿರಿಯರ ಪತ್ರಕರ್ತರ ಕಾರ್ಯವನ್ನು ಗೌರವಿಸಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!