ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನಾಕ್ರೋಶಕ್ಕೆ ಬಲಿಯಾಗಲಿದೆ- ರಮೇಶ್ ಕಾಂಚನ್
ಉಡುಪಿ: ಪ್ರತಿದಿನ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಯ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನರಿಗೆ ಸ್ಲೋ ಪಾಯ್ಸನ್ ನೀಡುತ್ತಿದೆ. ಅಧಿಕಾರಕ್ಕೆ ಬರುವ ಮೊದಲು ಅಚ್ಚೇ ದಿನ್ ಕೊಡುತ್ತೇವೆ ಎಂದು ದೇಶದ ಜನರಿಗೆ ಭರವಸೆ ನೀಡಿದ ಮೋದಿ ಅಧಿಕಾರಕ್ಕೆ ಬಂದ ಬಳಿಕ ದಿನಂಪ್ರತಿ ಬೆಲೆ ಏರಿಕೆಯನ್ನು ಮಾಡುವ ಮೂಲಕ ದೇಶದ ಜನರಿಗೆ ದ್ರೋಹವನ್ನು ಬಗೆದಿದ್ದಾರೆ.
ಅದಾನಿ, ಅಂಬಾನಿಯವರ ಹಿತಾಸಕ್ತಿಗಾಗಿ ದೇಶದ ಜನರ ಬದುಕು ದುಸ್ತರಗೊಳ್ಳುವಂತೆ ಮಾಡುತ್ತಿದ್ದಾರೆ.ಪ್ರತಿ ದಿನ ಸ್ವಲ್ಪ ಸ್ವಲ್ಪವೇ ಬೆಲೆ ಏರಿಕೆಯನ್ನು ಮಾಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ತಂತ್ರಗಾರಿಕೆಯು ಜನರಿಗೆ ಸ್ಲೋ ಪಾಯ್ಸನನ್ನು ನೀಡುವ ಕ್ರಿಮಿನಲ್ ಮನಸ್ಥಿತಿಯಾಗಿದೆ. ವ್ಯಕ್ತಿಗೆ ತಿಳಿಯದಂತೆ ಪ್ರತಿ ನಿತ್ಯ ಸ್ವಲ್ಪ ಸ್ವಲ್ಪವೆ ವಿಷವನ್ನು ನೀಡಿ ವ್ಯಕ್ತಿಯ ಅಂಗಾಂಗ ವೈಫಲ್ಯವನ್ನು ಮಾಡಿ ಕೊನೆಗೆ ಆ ವ್ಯಕ್ತಿಯನ್ನು ಸಾಯಿಸುವುದೇ ವಿಷ ನೀಡುವಾತನ ಉದ್ದೇಶವಾಗಿದೆ, ಪ್ರಸ್ತುತ ಕೇಂದ್ರ ಬಿಜೆಪಿ ಸರ್ಕಾರವು ಕೂಡ ಇಂಥದೇ ಕ್ರಿಮಿನಲ್ ಮನಸ್ಥಿತಿಯನ್ನು ಹೊಂದಿದ್ದು ಪೆಟ್ರೋಲ್ ಡೀಸೆಲ್ ಅಡುಗೆ ಅನಿಲದ ಬೆಲೆಯನ್ನು ದಿನಂಪ್ರತಿ ಸ್ವಲ್ಪ ಸ್ವಲ್ಪವೇ ಏರಿಕೆಯನ್ನು ಮಾಡಿ ದೇಶದ ಜನರನ್ನು ಆರ್ಥಿಕವಾಗಿ ಸಾಯಿಸುತ್ತಿದೆ.
ಕಚ್ಚಾ ತೈಲದ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇಳಿಕೆಯಾದರೂ ಮಧ್ಯ ಪ್ರಾಚ್ಯದ ಯುದ್ದದ ನೆಪವನ್ನು ಮುಂದಿಟ್ಟುಕೊಂಡು ದೇಶದಲ್ಲಿ ದಿನನಿತ್ಯ ಪೆಟ್ರೋಲ್ ಡೀಸೆಲ್ ಅಡುಗೆ ಅನಿಲದ ದರವನ್ನು ಏರಿಕೆ ಮಾಡಿ ಜನರನ್ನು ಲೂಟಿ ಹೊಡೆಯುತ್ತಿದ್ದಾರೆ, ಮೋದಿ ಸರ್ಕಾರ ಸ್ಲೋ ಪಾಯ್ಸನ್ ನೀಡುವ ತಂತ್ರಗಾರಿಕೆ ದೇಶದ ಜನರಿಗೆ ಇದೀಗ ಅರ್ಥವಾಗುತ್ತಿದ್ದು ಕೇಂದ್ರದ ಬಿಜೆಪಿ ಸರ್ಕಾರ ಜನಾಕ್ರೋಶಕ್ಕೆ ಬಲಿಯಾಗಲಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ತಿಳಿಸಿದ್ದಾರೆ.





