ಗಾಂಧೀಜಿಯ ರಾಮರಾಜ್ಯದ ಕನಸು ನನಸು ಮಾಡಲು ‘ವಿಬಿ-ಜಿ ರಾಮ್​-ಜಿ’- ಡಾ.ನವೀನ್

ಉಡುಪಿ: ದೇಶದಲ್ಲಿರುವ 7 ಲಕ್ಷ ಗ್ರಾಮಗಳನ್ನು ಸಬಲೀಕರಣ ಮಾಡುವ ಮೂಲಕ ವಿಕಸಿತ ಭಾರತ ನಿರ್ಮಿಸುವುದೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬದ್ಧತೆ, ಉದ್ದೇಶವಾಗಿದೆ. ಆ ಹಿನ್ನೆಲೆಯಲ್ಲಿಯೇ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದ್ದ ಮನರೇಗಾ ಯೋಜನೆಗೆ ಹೊಸ ದಿಕ್ಕು ನೀಡಲು, ಪಾರದರ್ಶಕವಾಗಿ ಯೋಜನೆ ಮುನ್ನಡೆಸಲು ‘ವಿಬಿ-ಜಿ ರಾಮ್​-ಜಿ’ ಎಂಬ ನಾಮಕರಣ ಮಾಡಲಾಗಿದೆ. ಮಹಾತ್ಮ ಗಾಂಧೀಜಿ ಹೆಸರು ತೆಗೆದು ಶ್ರೀರಾಮನ ಹೆಸರು ಇಟ್ಟಿಲ್ಲ. ಗಾಂಧೀಜಿ ಕಂಡಿದ್ದ ರಾಮರಾಜ್ಯದ ಕನಸು ನನಸು ಮಾಡಲು ‘ವಿಬಿ-ಜಿ ರಾಮ್​-ಜಿ’ ಕಾರ್ಯಪ್ರವೃತ್ತವಾಗಲಿದೆ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ನವೀನ್​ ತಿಳಿಸಿದರು.

ಉಡುಪಿಯ ಶಾರದಾ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಅಜೀವಿಕಾ ಮಿಷನ್​ (ಗ್ರಾಮೀಣ) ಕಾಯಿದೆ ‘ವಿಬಿ-ಜಿ ರಾಮ್​-ಜಿ’ ಜಾಗೃತಿ ಸಮಾವೇಶ’ದಲ್ಲಿ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ ‘ವಿಬಿ-ಜಿ ರಾಮ್​-ಜಿ’ ಯೋಜನೆಗೆ ವಿವಿಧ ಮಾನದಂಡ ಅಳವಡಿಸಿದೆ.  ಕಾಂಗ್ರೆಸ್​ನ ಪುಢಾರಿಗಳಿಗೆ ಈ ಯೋಜನೆಯಿಂದ ಇನ್ನು ದುಡ್ಡು ಕೊಳ್ಳೆ ಹೊಡೆಯಲು ಆಗದು. ಹೀಗಾಗಿಯೇ ಅವರು ದೇಶಾದ್ಯಂತ ಪ್ರತಿಭಟಿಸುತ್ತಿದ್ದಾರೆ.ಮನರೇಗಾ ಯೋಜನೆಯಲ್ಲಿ 11 ಲಕ್ಷ ಪ್ರಕರಣಗಳಲ್ಲಿ 300 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ. ಹೀಗಾಗಿ ಯೋಜನೆಯನ್ನು ಸುವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲು ಅನೇಕ ಮಾನದಂಡ ಅಳವಡಿಸಲಾಗಿದೆ. ಜಲ ಭದ್ರತೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ, ಹವಾಮಾನ ವೈಪರೀತ್ಯ ಎಂದು ನಾಲ್ಕು ವಿಭಾಗ ಮಾಡಲಾಗಿದೆ. 16 ಯೋಜನೆಗಳನ್ನು ಇದಕ್ಕೆ ಜೋಡಿಸಲಾಗಿದೆ. 100 ದಿನದ ಕೆಲಸದ ಅವಧಿಯನ್ನು 120ಕ್ಕೆ ಏರಿಸಿ ಕಾರ್ಮಿಕರ ಹಕ್ಕು ರಕ್ಷಿಸಲಾಗಿದೆ. ಬಯೋಮೆಟ್ರಿಕ್​ ಹಾಜರಾತಿ, ಜಿಯೋ ಟ್ಯಾಗ್​ ಮೂಲಕ ತಂತ್ರಜ್ಞಾನ ಅಳವಡಿಸಿ ಪಾರದರ್ಶಕತೆ ಅಳವಡಿಸಲಾಗಿದೆ. ಯಾವುದೇ ರಾಜ್ಯ ಈ ಯೋಜನೆಯಡಿ ಯಾವ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿದೆ? ಎಷ್ಟು ಅನುದಾನ? ಕೆಲಸದ ಅವಧಿ. ಕಾರ್ಮಿಕರ ಸಂಖ್ಯೆ, ರ್ಖಚಾಗಲಿರುವ ಅನುದಾನ ಸೇರಿದಂತೆ ಸಮಗ್ರ ಅಂಕಿ-ಅಂಶವಿರುವ ಪ್ರಸ್ತಾವನೆ ನೀಡಬೇಕಿದೆ. ಬಳಿಕವೇ ಕೇಂದ್ರ ಸರ್ಕಾರ ಶೇ.40 ಅನುದಾನ ನೀಡಲಿದೆ. ಇದು ಗ್ರಾಮೀಣ ಭಾಗಗಳ ಅಭಿವೃದ್ಧಿಯಲ್ಲಿ ಆಯಾ ರಾಜ್ಯ ಸರ್ಕಾರದ ಜವಾಬ್ದಾರಿ ನಿಭಾಯಿಸಲು, ಸ್ಥಳೀಯ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಪರಿವರ್ತಿಸಿದ ಯೋಜನೆಯಾಗಿದೆ ಎಂದು ಡಾ. ನವೀನ್​ ಮಾಹಿತಿ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್​ ನಾಯಕ್​ ಧ್ಯೇಯ ಗೀತೆ ಹಾಗೂ ಸುಜಲಾ ಸುವರ್ಣ ವಂದೇ ಮಾತರಂ ಗೀತೆ ಹಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ್​ ಶೆಟ್ಟಿ ಹೆರ್ಗ ಸ್ವಾಗತಿಸಿದರು. ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಮಲಾಕ್ಷ ಹೆಬ್ಬಾರ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ನಳಿನಿ ಪ್ರದೀಪ್​ ವಂದಿಸಿದರು.

ಕಾಂಗ್ರೆಸ್​ನವರಿಗೆ ಶ್ರೀರಾಮನ ಹೆಸರು ಕೇಳಿದರೆ ಸಹಿಸಲು ಆಗುತ್ತಿಲ್ಲ. ರಾಮಸೇತು ಎಂದರೆ ಅವರಿಗೆ ಹೊಟ್ಟೆ ಉರಿಯುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರ ನರೇಗಾ ಯೋಜನೆ, ಉದ್ಯೋಗ ಖಾತ್ರಿ ಯೋಜನೆ ರದ್ದು ಮಾಡಿದೆ ಎಂದು ಸುಳ್ಳು ಹೇಳುತ್ತ ಪ್ರತಿಭಟಿಸುತ್ತಿದೆ. ನರೇಗಾ ಯೋಜನೆಗೆ ರಾಮನ ಹೆಸರು ಇಟ್ಟಿಲ್ಲ. ನರೇಗಾ ಯೋಜನೆಯಲ್ಲಿ ಆಗಿರುವ, ಆಗುತ್ತಿರುವ ಭ್ರಷ್ಟಾಚಾರ ತಡೆಯಲು ‘ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಅಜೀವಿಕಾ (ಗ್ರಾಮೀಣ) ಮಿಫಿನ್​ ಕಾಯಿದೆ’ ಎಂದು ಹೆಸರಿಟ್ಟು, ಯೋಜನೆಯಲ್ಲಿ ಪಾರದರ್ಶಕತೆ ಕಾಪಾಡುವ ಉದ್ದೇಶವಾಗಿದೆ- ಕಮಲಾಕ್ಷ ಹೆಬ್ಬಾರ್​. ರೈತ ಮೋರ್ಚಾ ಉಡುಪಿ ಜಿಲ್ಲಾಧ್ಯಕ್ಷ

Leave a Reply

Your email address will not be published. Required fields are marked *

error: Content is protected !!