ರಾಜ್ಯಮಟ್ಟದ ಹೊನಲು ಬೆಳಕಿನ ಕೋಟಿಚೆನ್ನಯ ಹಗ್ಗಜಗ್ಗಾಟ ಸ್ಪರ್ಧೆ- ಆಂಜನೇಯ ತಂಡ ಪ್ರಥಮ
![](https://udupitimes.com/wp-content/uploads/2024/02/IMG_20240221_082605.jpg)
ಕೋಟಿ ಚೆನ್ನಯಟ್ರೋಫಿ – 2024 ಹಗ್ಗಜಗ್ಗಾಟ ಕ್ರೀಡಾಕೂಟ ಸೀಸನ್ 2ರಲ್ಲಿ ಶ್ರೀ ಆಂಜನೇಯ ಕಣ್ವತೀರ್ಥ ಮಹಿಳಾ ಮತ್ತು ಪುರುಷರ ತಂಡಗಳು ಪ್ರಶಸ್ತಿ ಸ್ವೀಕರಿಸಿತು.
ಉರ್ವ, ಫೆ.21: ಕೋಟಿ ಚೆನ್ನಯ ಸೇವಾ ಬ್ರಿಗೇಡ್ ಮಂಗಳೂರು ಇದರ ಆಶ್ರಯದಲ್ಲಿ ಕಿರಣ್ ಕುಮಾರ್ ಕೋಡಿಕಲ್ ನೇತೃತ್ವದಲ್ಲಿ ರವಿವಾರ ಉರ್ವ ಮೈದಾನದಲ್ಲಿ ಆಯೋಜಿಸಲಾದ ಕೋಟಿ ಚೆನ್ನಯ ಟ್ರೋಫಿ – 2024 ಹಗ್ಗಜಗ್ಗಾಟ ಕ್ರೀಡಾಕೂಟ ಸೀಸನ್ 2ರಲ್ಲಿ ಶ್ರೀ ಆಂಜನೇಯ ಕಣ್ವತೀರ್ಥ ತಂಡವು ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ಪಾರಮ್ಯ ಮೆರೆಯಿತು.
ಐಪಿಎಲ್ ಮಾದರಿಯಲ್ಲಿ ಭವ್ಯ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ವರ್ಣರಂಜಿತ ವಿದ್ಯುತ್ ದೀಪಗಳ ನಡುವೆ ನಡೆದ ಸ್ಪರ್ಧೆಯಲ್ಲಿ ಬಾರಿ ಪೈಪೋಟಿಯ ಸ್ಪರ್ಧೆ ನಡೆಯಿತು.
![](https://udupitimes.com/wp-content/uploads/2024/02/IMG_20240221_082720-1024x461.jpg)
ರನ್ನರ್ ಆಪ್ ಆಗಿ ಮಹಿಳಾ ವಿಭಾಗದಲ್ಲಿ ಧೂಮಾವತಿ ಮಿತ್ರಮಂಡಳಿ ಪಡ್ರೆ ತಂಡ, ಪುರುಷರ ವಿಭಾಗದಲ್ಲಿ ಬಜಪೆಯ ಅಟಿಲ್ಐ ತಂಡ ಪ್ರಶಸ್ತಿ ಹಾಗೂ ನಗದು ಪಡೆಯಿತು. ಕ್ರೀಡಾಕೂಟದಲ್ಲಿ 23 ಮಹಿಳಾ ತಂಡ, 17 ಪುರುಷ ತಂಡಗಳು ಭಾಗವಹಿಸಿದ್ದವು. ವಿಜೇತರಿಗೆ 6 ಅಡಿ ಎತ್ತರದ ಬೃಹತ್ ಟ್ರೋಫಿ, 40 ಸಾವಿರ ರೂ. ನಗದು ಬಹುಮಾನ ನೀಡಲಾಯಿತು.
ಮಹಿಳಾ ವಿಭಾಗದಲ್ಲಿ ಶ್ರೀ ಮಹಾಲಿಂಗೇಶ್ವರ ಕಂಜತ್ತೂರು, ಫ್ರೆಂಡ್ ಉಡುಪಿ ಪುರುಷರ ವಿಭಾಗದಲ್ಲಿ ಶಾಸ್ತ್ರ ಕಡಂಬಾರ್ ಮತ್ತು ವೇದಾoತ್ ಕಟೀಲು ತಂಡ ತಲಾ ಮೂರು ಮತ್ತು ನಾಲ್ಕನೇ ಸ್ಥಾನ ಪಡೆಯಿತು, ಕ್ರೀಡಾ ಕಾರ್ಯಕ್ರಮದ ಜತೆಗೆ ಕೋಟಿ ಚೆನ್ನಯ ಬ್ರಿಗೇಡ್ ವತಿಯಿಂದ ಸಮಾಜಸೇವಾ ಕಾರ್ಯವಾಗಿ ಆಯ್ದ ಸಮ ಸೇವಾಶ್ರಮಕ್ಕೆ ನೆರವು,ಕಣ್ಣಿನ ದೃಷ್ಟಿ ಕಳೆದುಕೊಂಡ ತಂಡಕ್ಕೆ ನೆರವು,ವಿದ್ಯಾರ್ಥಿವೇತನ, ವೈದಕೀಯ ಸವಲತ್ತು, ವೀಲ್ ಚೇರ್ ವಿತರಣೆ ನಡೆಯಿತು. ಕನ್ಯಾಡಿ ಧರ್ಮಸ್ಥಳ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಬ್ರಿಗೇಡ್ ಅಧ್ಯಕ್ಷ ಕಿರಣ್ ಕುಮಾರ್ ಕೋಡಿಕಲ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಪ್ರಕಾಶ್ ಪಿ.ಎಸ್, ಶಾಸಕ ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರ್, ಪ್ರಮುಖರಾದ ಶರಣ್ ಪಂಪ್ ವೆಲ್, ವೈಶಾಲಿ ಮನೋಹರ್, ಉದ್ಯಮಿ ರವೀಂದ್ರ ಶೇಟ್, ದ.ಕ. ಬಿಜೆಪಿ ನಿ. ಪೂ, ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಪಾಲಿಕೆ ಸದಸ್ಯರು, ಬ್ರಿಗೇಡ್ ಪದಾಧಿಕಾರಿಗಳು ಮತ್ತಿತರರಿದ್ದರು.