ಹಣ ದುಪ್ಪಟ್ಟು ಆಸೆಯಿಂದ ಮೋಸ ಹೋದ ವಿಮಾಪ್ರತಿನಿಧಿ- ನದಿಗೆ ಹಾರಿ ಆತ್ಮಹತ್ಯೆ
![](https://udupitimes.com/wp-content/uploads/2023/12/IMG_20231225_094039-1024x1103.jpg)
ಬಂಟ್ವಾಳ: ಸಂಗಬೆಟ್ಟು ಸಮೀಪದ ಪುಚ್ಚಮೊಗರು ಬಳಿ ಫಲ್ಗುಣಿ ನದಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ಬೆಳಕಿಗೆ ಬಂದಿದೆ.
ಕುಕ್ಕಿಪಾಡಿ ಗ್ರಾಮದ ಏರೋಡಿ ನಿವಾಸಿ ಜಾನ್ ಸಂತೋಷ್ ಡಿಸೋಜ ಅವರ ಪತ್ನಿ ವೀಟಾ ಮರಿನಾ ಡಿಸೋಜ (32) ಆತ್ಮಹತ್ಯೆಗೈದವರು.
ಅವರು ಶನಿವಾರ ರಾತ್ರಿ 9 ಗಂಟೆಗೆ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಹೊರಟು ಬಳಿಕ ನಾಪತ್ತೆ ಯಾಗಿದ್ದರು. ಆ ಬಳಿಕ ವಿಷಯ ತಿಳಿದು ಸ್ಥಳೀಯರು ಹುಡುಕಾಟ ನಡೆಸಿದಾಗ ಫಲ್ಗುಣಿ ಸೇತುವೆ ಮೇಲೆ ಇವರ ದ್ವಿಚಕ್ರ ವಾಹನ ಮಾತ್ರ ದೊರೆತಿದ್ದು, ಅಗ್ನಿಶಾಮಕದಳ ಆಗಮಿಸಿ ಹುಡುಕಾಡಿದ್ದರು. ಕಳೆದ ಏಳು ವರ್ಷಗಳ ಹಿಂದೆ ನಿರ್ಮಾಣಗೊಂಡ ಬಹುಗ್ರಾಮ ಕುಡಿಯುವ ನೀರಿನ ಅಣೆಕಟ್ಟೆ ಬಳಿ ರವಿವಾರ ಮೃತದೇಹ ಪತ್ತೆಯಾಗಿದೆ.
ಆರ್ಥಿಕ ಸಂಕಷ್ಟ: ಇತ್ತೀಚೆಗಷ್ಟೇ ಹಣ ದುಪ್ಪಟ್ಟುಗೊಳಿಸುವ ಆ್ಯಪ್ವೊಂದರಲ್ಲಿ 21 ಲಕ್ಷ ರೂ. ಮೊತ್ತದ ಹಣ ಕಳೆದುಕೊಂಡಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಗೆ ಅವರು ದೂರು ಸಲ್ಲಿಸಿದ್ದರು. ಈ ಹಿಂದೆ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ಅವರು ಬಳಿಕ ಹುದ್ದೆ ತೊರೆದು ವಿಮಾ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದರು.
ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್:0802572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್ಎಸ್ಆರ್ ಸೆಕ್ಟರ್- 4, ಬೆಂಗಳೂರು.