ಪೂರ್ವಜರು ನೀಡಿದ ಔಷಧಿಯ ಜ್ಞಾನವನ್ನು ಯುವಪೀಳಿಗೆ ಅನುಸರಿಸಬೇಕಿದೆ- ಡಾ. ಸತ್ಯನಾರಾಯಣ

ಪುತ್ತೂರು: ಫೆ.13 : ಕೃಷಿಕ ಅಡಿಕೆ ತೋಟದಲ್ಲಿ ಔಷಧೀಯ ಗಿಡ ಮರಗಳನ್ನು ಬೆಳೆಸಿದಲ್ಲಿ ಅನೇಕ ರೋಗಗಳನ್ನು ತಡೆಗಟ್ಟುವುದರ ಜೊತೆಗೆ ನಮ್ಮ ಮನೆಯಂಗಳದಲ್ಲಿ ನಾವೇ ಔಷಧೀಯನ್ನು ತಯಾರಿಸಿದ ತೃಪ್ತಿ ನಮಗಿರುತ್ತದೆ ಎಂದು

ಕಾರ್ಕಳ ಕರ್ನಾಟಕ ರಾಜ್ಯ ಔಷಧೀಯ ಗಿಡಮೂಲಿಕ ಪ್ರಾಧಿಕಾರ ಕರ್ನಾಟಕ ಜೀವವೈವಿಧ್ಯ ಮಂಡಳಿಯ ಸಂಚಾಲಕ ಡಾ.ಸತ್ಯನಾರಾಯಣ ಭಟ್‌ ಅವರು ಹೇಳಿದ್ದಾರೆ.

ಕ್ಯಾಂಪ್ಕೋ ನಿಯಮಿತ, ಮಂಗಳೂರು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ಎಆರ್ ಡಿಎಫ್) ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಪುತ್ತೂರು, ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ 5ನೇ ಬೃಹತ್ ಕೃಷಿ ಯಂತ್ರ ಮೇಳ -2023 ಮತ್ತು ಕನಸಿನ ಮನೆ ಕಾರ್ಯಕ್ರಮದ 3ನೇಯ ದಿನದ ಕಾರ್ಯಕ್ರಮದಲ್ಲಿ ಅಡಿಕೆ ಮತ್ತು ಇನ್ನಿತರ ತೋಟಗಾರಿಕಾ ಬೆಳೆಗಳೊಂದಿಗೆ ಅಂತರ ಬೆಳೆಯಾಗಿ ಔಷಧೀಯ ಸಸ್ಯಗಳು ಎಂಬ ವಿಚಾರ ಕುರಿತು ನಡೆದ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಕೃಷಿಕನ ಅಡಿಕೆ ತೋಟದಲ್ಲಿ ಔಷಧೀಯ ಗಿಡ ಮರಗಳನ್ನು ಬೆಳೆಸಬೇಕು. ಹೀಗೆ ಬೆಳೆಸಿದ್ದಲ್ಲಿ ನಮಗೆ ಬರುವ ಅನೇಕ ರೋಗಗಳನ್ನು ತಡೆಗಟ್ಟುವುದರ ಜೊತೆಗೆ ನಮ್ಮ ಮನೆಯಂಗಳದಲ್ಲಿ ನಾವೇ ಔಷಧೀಯನ್ನು ತಯಾರಿಸಿದ ತೃಪ್ತಿ ನಮಗಿರುತ್ತದೆ ಎಂದರು ಹಾಗೂ ಎರ್ಪೆ ಮರದ ಎಲೆ, ಪಾಳೆಯಮರದ ಕೆತ್ತೆ, ತುಳಸಿ, ಮಾಫಲ, ಕದಂಬ ಮರ, ಇಪೆಮರ, ಓಟೆಹುಳಿ, ಲಾವಂಚ ಇವೆಲ್ಲದರ ಔಷಧಿಯ ಗುಣಗಳ ಕುರಿತು ಮಾಹಿತಿ ನೀಡಿದರು.

ಪೂರ್ವಿಕರು ಕೊಟ್ಟ ಔಷಧೀಯ ಜ್ಞಾನವನ್ನು ಇಂದು ಯುವ ಜನಾಂಗ ಅರಿಯಬೇಕಿದೆ. ಆಟಿ ಅಮಾವಾಸ್ಯೆಯಿಂದ ಆರಂಭಿಸಿ ಬಲೀಂದ್ರ ಪೂಜೆಯವರೆಗೆ ಬಳಸಬೇಕಾದ ಪಾಲೆಯ ಮರವನ್ನು ನಾವಿಂದು ಮರೆತು ಇನ್ಯಾವುದೋ ಇಂಗ್ಲಿಷ್ ಮದ್ದಿನತ್ತ ನಮ್ಮ ಗಮನ ಹೋಗುತ್ತಿರುವುದು ಬೇಸರದ ವಿಷಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿವೇಕಾನಂದ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ನಿರೂಪಿಸಿದ ಕೃಷಿಯಂತ್ರ ಮೇಳದ ವಿಶೇಷ ಸಂಚಿಕೆ ವಿಕಸನ ವನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆ ಮೇಲೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್‌ ಪಿ., ಕಾರ್ಯದರ್ಶಿಗಳಾದ ಕೆ.ಎಂ ಕೃಷ್ಣ ಭಟ್, ಕ್ಯಾಂಪ್ಕೋ ನಿಯಮಿತ ಶಂಕರನಾರಾಯಣ ಭಟ್‌ ಖಂಡಿಗೆ, ಕೃಷ್ಣ ಕುಮಾರ್, ರಾಘವೇಂದ್ರ ಭಟ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ಕೃಷಿ ಸಂಬಂಧಿತ ವಿದ್ಯಾರ್ಥಿಗಳಿಗಾಗಿ ಹಾಗೂ ಸಾರ್ವಜನಿಕರಿಗೆ ಆಯೋಜಿಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ 

ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರು ಇಲ್ಲಿನ  ಪ್ರಜ್ವಲ್ ಮತ್ತು ಮನ್ವಿತ್ ಪ್ರಥಮ, ವಿವೇಕಾನಂದ ಕಾಲೇಜು ಪುತ್ತೂರು ಇದರ ಎಂಕಾಂ ವಿಭಾಗದ ಶರಣ್ಯ ಮತ್ತು ಸುಶ್ಮಿತಾ ದ್ವಿತೀಯ ಹಾಗೂ  ಕೃಷಿ ವಿಶ್ವವಿದ್ಯಾನಿಲಯ ಶಿವಮೊಗ್ಗ ಇಲ್ಲಿನ  ಗೌತಮಿ ಕಾಯರ್ಗ, ಜಶ್ಮಿತಾ ಕಾರ್ಯಗ ಅವರು ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.

ಇನ್ನು ಸಾರ್ವಜನಿಕ ವಿಭಾಗದಲ್ಲಿ ಸಂತೋಷ್‌ ಕುಮಾರ್ ಕೆದಂಬಾಡಿ ಪ್ರಥಮ, ಸತ್ಯಶಂಕರ್ ಚೂಂತಾರು ದ್ವಿತೀಯ, 

ವಸಂತ ಎನ್‌ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.

ರಸಪ್ರಶ್ನೆ ಕಾರ್ಯಕ್ರಮದ ನಂತರ ವೇದಿಕೆಯಲ್ಲಿ ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಂದ ಹಾಗೂ ಪೂರ್ಣಿಮಾ ರೈ ಬಳಗದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *

error: Content is protected !!