ಪುತ್ತೂರು: ಅಡಿಕೆ ಬೆಳೆ ನಿರ್ವಹಣೆ- ರೋಗಗಳ ಹತೋಟಿ ಕುರಿತು ವಿಚಾರಗೋಷ್ಠಿ

ಪುತ್ತೂರು ಫೆ.13(ಉಡುಪಿ ಟೈಮ್ಸ್ ವರದಿ): ಕ್ಯಾಂಪ್ಕೋ ನಿಯಮಿತ ಮಂಗಳೂರು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಟಾನ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಪುತ್ತೂರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ ಗಂಗೋತ್ರಿ ಇದರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಬೃಹತ್ 5 ನೇ ಕೃಷಿ ಯಂತ್ರ ಮೇಳ 2023 ಮತ್ತು ಕನಸಿನ ಮನೆ ಕಾರಕ್ರಮದ 2ನೇಯ ದಿನ ಕಾರ್ಯಕ್ರಮದಲ್ಲಿ ಅಡಿಕೆ ಬೆಳೆ ನಿರ್ವಹಣೆ ಮತ್ತು ರೋಗಗಳ ಹತೋಟಿ” ಕುರಿತು ವಿಚಾರ ಗೋಷ್ಠಿ ನಡೆಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕಾಸರಗೋಡು ಐಎಫ್‌ಎಆರ್ ಮತ್ತು ಸಿಪಿಸಿಆರ್ ಐ ಬೆಳೆ ಸಂರಕ್ಷಣಾ ವಿಭಾಗ ಮುಖ್ಯಸ್ಥರಾದ ಡಾ. ವಿನಾಯಕ ಹೆಗಡೆ ಮಾತನಾಡಿ, ಕರಾವಳಿಯಲ್ಲಿ ಅತಿಯಾಗಿ ಬೆಳೆಯುವ ಅಡಿಕೆ ಕೃಷಿಯಲ್ಲಿ ಕಂಡು ಬರುವ ಎಲೆ ಚುಕ್ಕಿ ರೋಗ, ಹಳದಿ ರೋಗ, ಕೊಳೆ ರೋಗ, ಹಿಂಗಾರ ಒಣಗುವಿಕೆ, ಬೇರು ಹುಳ ಮುಂತಾದ ರೋಗಗಳನ್ನು ನಿವಾರಿಸುವ ಕ್ರಮಗಳ ಬಗ್ಗೆ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತಾಗಿ ಮಾಹಿತಿ ನೀಡಿದರು.

ಅಡಿಕೆ ಕೃಷಿಗೆ ಒಂದು ಬಾರಿ ರೋಗ ತಗುಲಿದರೆ ಅದನ್ನು ನಿವಾರಿಸಲು ವರ್ಷಗಳೇ ತಗುಲುತ್ತವೆ. ಅಂತಹ ಸಂದರ್ಭದಲ್ಲಿ ನಾವು ಹೆಚ್ಚು ಗಮನ ಹರಿಸುವುದು ಅಗತ್ಯ ಪೋಷಕಾಂಶಗಳ ನಿರ್ವಹಣೆ ಹಾಗೂ ನೀರಿನ ಸರಬರಾಜನ್ನು ಸರಿಯಾಗಿ ನೋಡಿಕೊಂಡಲ್ಲಿ ರೋಗ ನಿರೋಧಕಗಳನ್ನು ಬಳಸುವ ಅಗತ್ಯತೆಯೂ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ವಿಟ್ಲದ ಸಿಪಿಸಿಆ‌ರ್ ಐ ಯ ಹಿರಿಯ ವಿಜ್ಞಾನಿ ಡಾ.ನಾಗರಾಜ್ ಎನ್ ಅವರು ಮಾತನಾಡಿ, ಕಾರ್ಕಳ ಭಾರತದಲ್ಲಿ ಅಡಿಕೆಗೆ ಒಂದು ಪೂಜ್ಯನೀಯ ಸ್ಥಾನವಿದೆ. ಅದರಲ್ಲೂ ಕರ್ನಾಟಕ ಕೃಷಿಯಲ್ಲಿ ಅಡಿಕೆಯು ಮೊದಲ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಮಂಗಳ ತಳಿಗೆ ಅತೀ ಹೆಚ್ಚು ಬೇಡಿಕೆ ಇದ್ದು ಇದು ಅತೀ ಶೀಘ್ರದಲ್ಲಿ ಫಸಲನ್ನು ನಿಡುವ ತಳಿಯಗಿದೆ. ಕೃಷಿ ಎಂಬುವುದು ಕೇವಲ ಆದಾಯಕ್ಕೆ ಸೀಮಿತವಲ್ಲ. ಆದರ ಪೋಷಣೆಯು ಅಗತ್ಯ. ಹಾಗಾಗಿ ವರ್ಷಕ್ಕೊಮ್ಮೆ ಅದರ ಮಣ್ಣನ್ನು ಪರಿಶೀಲಿಸಬೇಕು ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ ಕೃಷ್ಣ ಭಟ್ ಹಾಗೂ ಕ್ಯಾಂಪ್ಕೋ ನಿಯಮಿತ ಮಂಗಳೂರಿನ ನಿರ್ದೇಶಕರಾದ ದಯಾನಂದ ಹೆಗಡೆ,  ಪುತ್ತೂರಿನ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಶ್ವೇತಾಂಬಿಕಾ ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

error: Content is protected !!