ರಸ್ತೆ ಗುಂಡಿಯಿಂದಾಗಿ ಕೆಟ್ಟ ಆ್ಯಂಬುಲೆನ್ಸ್- ರಸ್ತೆಯಲ್ಲೇ ನರಳಿದ ಗರ್ಭಿಣಿ
ಚಿಕ್ಕಮಗಳೂರು ಫೆ.13: ಜಿಲ್ಲೆಯ ಕಳಸ ಪಟ್ಟಣ ಹಳುವಳ್ಳಿ ಎಂಬಲ್ಲಿ ಗರ್ಭಿಣಿ ಮಹಿಳೆಯೊಬ್ಬರನ್ನು ಹೆರಿಗೆಗೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ರಸ್ತೆಗೆ ಗುಂಡಿಯಿಂದಾಗಿ ಆ್ಯಂಬುಲೆನ್ಸ್ ಕೆಟ್ಟುನಿಂತು ಗರ್ಭಿಣಿ ಮಹಿಳೆ ಗಂಟೆಗಟ್ಟಲೆ ನೋವಿನಿಂದ ನರಳಿದ ಮನಕಲುಕುವ ಘಟನೆಯೊಂದು ನಡೆದಿದೆ.
ಹೆರಿಗೆ ನೋವಿನಿಂದ ಬಳಲುತ್ತಿದ್ದ ಕೂಲಿಕಾರ್ಮಿಕ ವರ್ಗದ ಮಹಿಳೆಯೊಬ್ಬರನ್ನು ಕುಟುಂಬಸ್ಥರು ನಿನ್ನೆ ಕಳಸ ಪಟ್ಟಣದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರು ಇಲ್ಲದ ಕಾರಣ ಕುಟುಂಬಸ್ಥರು ಆಸ್ಪತ್ರೆಯ 108 ಆ್ಯಂಬುಲೆನ್ಸ್ ನಲ್ಲಿ ಗರ್ಭಿಣಿಯನ್ನು ಕೊಪ್ಪ ಪಟ್ಟಣಕ್ಕೆ ಕರೆದೊಯ್ಯುತ್ತಿದ್ದರು. ಈ ವೇಳೆ ಕಳಸ ಪಟ್ಟಣ ಸಮೀಪದ ಹಳುವಳ್ಳಿ ಎಂಬಲ್ಲಿ ರಸ್ತೆಯಲ್ಲಿದ್ದ ಗುಂಡಿಗಿಳಿದ ವೇಳೆ ಆ್ಯಂಬುಲೆನ್ಸ್ ನ ಆಕ್ಸೆಲ್ ಬ್ಲೇಡ್ ಕಟ್ಟಾಗಿ ಕೆಟ್ಟು ನಿಂತಿದೆ. ಚಾಲಕ ಎಷ್ಟೇ ಪ್ರಯತ್ನ ಮಾಡಿದರೂ ಆ್ಯಂಬುಲೆನ್ಸ್ ಸರಿಯಾಗಿಲ್ಲ. ಈ ವೇಳೆ ಆ್ಯಂಬುಲೆನ್ಸ್ ನಲ್ಲಿ ಗರ್ಭಿಣಿ ನೋವಿನಿಂದ ನರಳಾಡುತ್ತಲೇ ಇದ್ದರೆಂದು ವರದಿಯಾಗಿದೆ.
ಈ ಘಟನೆಗೆ ಸಂಬಂಧಿಸಿ ಕ್ಷೇತ್ರದ ಶಾಸಕರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.