ಅಂಬೇಡ್ಕರ್ ಗೆ ಅವಮಾನ: ಜೈನ್ ಕುಲಸಚಿವರ ವಜಾಗೊಳಿಸಿ- ಸುಂದರ ಮಾಸ್ತರ್
ಉಡುಪಿ:ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರ ನಾಯಕರಾದ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ರವರಿಗೆ ಅವಮಾನ ಮಾಡಲು ಕುಮ್ಮಕ್ಕು ನೀಡಿದ ವಿಶ್ವವಿದ್ಯಾನಿಲಯದ ಕುಲಪತಿಯವರನ್ನು ಮತ್ತು ಉಪನ್ಯಾಸಕರನ್ನು ಈ ಕೂಡಲೇ ವಜಾ ಮಾಡಬೇಕು ಮತ್ತು ರೂಪಕ ಬರೆದು ನಿರ್ದೇಶಿಸಿದ ಅಭಿನಯಿಸಿದ ವಿದ್ಯಾರ್ಥಿಗಳ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಿ ತಕ್ಷಣವೇ ಜೈಲಿಗಟ್ಟಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಸುಂದರ ಮಾಸ್ತರ್ ಒತ್ತಾಯಿಸಿದ್ದಾರೆ.
ಅವರು ಇಂದು ಉಡುಪಿ ನಗರ ಪೋಲಿಸ್ ಠಾಣೆಗೆ ಲಿಖಿತ ದೂರು ನೀಡಿ ಮಾತನಾಡಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನ ಅಡಿಯಲ್ಲಿ ವಿಶ್ವವಿದ್ಯಾನಿಲಯದಲ್ಲಿ ಅಲ್ಪಸಂಖ್ಯಾತ ಕೋಟಾದಡಿಯಲ್ಲಿ ಮೀಸಲಾತಿ, ಅನುದಾನ, ರಿಯಾಯಿತಿ ಪಡೆದು ಅನುಭವಿಸಿ ಈಗ ಅಂಬೇಡ್ಕರ್ ರವರಿಗೇ ಅವಮಾನ ಮಾಡಿರುವುದು ಅಕ್ಷಮ್ಯ ಅಪರಾಧ ಎಂದರು.
ಉಡುಪಿ ನಗರ ಠಾಣೆಗೆ ಹೋದ ನಿಯೋಗದಲ್ಲಿ ದ.ಸಂ.ಸ. ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಜಿಲ್ಲಾ ಖಜಾಂಚಿ ಶ್ರೀಧರ್ ಕುಂಜಿಬೆಟ್ಟು, ದಲಿತ ಮಹಿಳಾ ಸಂಚಾಲಕಿ ಕುಸುಮ ಗುಜ್ಜರ್ ಬೆಟ್ಟು, ವತ್ಸಲಾ ವಿನೋದ್, ದಲಿತ ಮುಖಂಡರಾದ ಸಂಪತ್ ಗುಜ್ಜರ್ ಬೆಟ್ಟು, ನಂದಕುಮಾರ್, ಅನಿಶ್, ಗೌತಮ್, ತೌಸಿಫ್ ಉಪಸ್ಥಿತರಿದ್ದರು.