ಕೃಷಿಕರ ಉಳಿವಿಗೆ ಸಂಘಟನೆಯ ಪಾತ್ರ ದೊಡ್ಡದು- ಡಾ.ಎಂ. ಎನ್.ರಾಜೇಂದ್ರ
ಉಡುಪಿ ಫೆ.11(ಉಡುಪಿ ಟೈಮ್ಸ್ ವರದಿ): ಕೃಷಿಯ ಹಾಗೂ ಕೃಷಿಕರ ಉಳಿವಿಗೆ ಸಂಘಟನೆಯ ಪಾತ್ರ ದೊಡ್ಡದು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ.ನ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಹೇಳಿದ್ದಾರೆ.
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ಇಂದು ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ನಡೆದ ಜಿಲ್ಲಾ ರೈತ ಸಮ್ಮೇಳನವನ್ನು ಉದ್ಘಾಟಿಸಿ ಮಾತಾನಾಡಿದ ಅವರು, “ ಈ ಜಿಲ್ಲೆಯಲ್ಲಿ ಕೃಷಿ ಸಂಕಷ್ಟದಲ್ಲಿದೆ. ಅನೇಕ ಸಮಸ್ಯೆಗಳಿಂದ ಕೃಷಿಕರು ಕೃಷಿ ಭೂಮಿಯನ್ನು ಹಡಿಲು ಬಿಡುತ್ತಿದ್ದಾರೆ. ಹೊಸ ತಂತ್ರಜ್ಙಾನಗಳನ್ನು ಅಳವಡಿಸಿ, ಕೃಷಿಯನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಸಂಘಟನೆಯ ಪಾತ್ರ ಬಹಳ ದೊಡ್ಡದು. ಈ ದಿಶೆಯಲ್ಲಿ ಭಾರತೀಯ ಕಿಸಾನ್ ಸಂಘ ರೈತರನ್ನು ಸಂಘಟಿಸಿ, ಈ ಸಮ್ಮೇಳನಗಳನ್ನು ಆಯೋಜಿಸುತ್ತಾ ಬಂದಿರುವುದು ಶ್ಲಾಘನೀಯ” ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ. ಸುನೀಲ್ ಕುಮಾರ್ ರವರು ಮಾತನಾಡಿ “ ಉಡುಪಿ ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ ಭಾರತೀಯ ಕಿಸಾನ್ ಸಂಘ ರೈತರನ್ನು ಸಂಘಟಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರಕಾರ, ಇಲಾಖೆ ಮತ್ತು ರೈತರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದೆ. ಆಗಾಗ ಅಧಿಕಾರಿಗಳೊಂದಿಗೆ, ಇಲಾಖೆಯೊಂದಿಗೆ ಸಮಾಲೋಚಿಸಿ, ರೈತ ಪರವಾದ ತೀರ್ಮಾನಗಳನ್ನು ತರುವಲ್ಲಿ ಕಾರ್ಯೋನ್ಮುಖವಾಗಿದೆ. ಈ ಸಂಘಟನೆಯ ಕೆಲಸ ಇನ್ನು ವಿಸ್ತರಿಸುವ ನಿಟ್ಟಿನಲ್ಲಿ ಇಂತಹ ಸಮ್ಮೇಳನಗಳು ಅತೀ ಅಗತ್ಯ” ಎಂದರು.
ದಿಕ್ಸೂಚಿ ಮಾತುಗಳನ್ನಾಡಿದ ಸಾಮಾಜಿಕ ಚಿಂತಕ ಜಿ.ವಾಸುದೇವ ಭಟ್ ಪೆರಂಪಳ್ಳಿ ಅವರು, “ ಕೃಷಿಕರು ತಮ್ಮನ್ನ ಅವಲೋಕನ ಮಾಡಿಕೊಳ್ಳಬೇಕಾದ ಕಾಲಘಟ್ಟದಲ್ಲಿ ಇದ್ದೇವೆ. ಕೃಷಿಕ ಭೂಮಿಗಳನ್ನು ಹಡಿಲು ಬಿಡುತ್ತಿರುವುದು, ಗೋವನ್ನು ಸಾಕಲಾರದೇ ಮಾರಾಟ ಮಾಡುತ್ತಿರುವುದು ಉತ್ತಮ ಸಂಕೇತವಲ್ಲ. ಕೃಷಿ, ಭೂಮಿ, ಗೋವು ಎಲ್ಲವೂ ಒಂದಕ್ಕೊಂದು ಪೂರಕವಾಗಿದ್ದು ಕೃಷಿಕನ ಸಂಪತ್ತಾಗಿತ್ತು. ಆದರೆ ಆ ಸಂಪತ್ತಿನ ಕಲ್ಪನೆ ಇಂದು ದೂರವಾಗಿದೆ. ಮನೆಗಳಲ್ಲಿ ಯುವ ಪೀಳಿಗೆಯನ್ನು ಕೃಷಿಗೆ ಸೆಳೆಯುವಲ್ಲಿ ಹಿರಿಯರು ಸೋಲುತ್ತಿದ್ದಾರೆ. ಈ ದೇಶದ ಜೀವಾಳ ಕೃಷಿಯೇ ಎಂಬುದನ್ನು ಯಾರೂ ಮರೆಯಬಾರದು. ಈಆಗಾಧ ಜನಸಂಖ್ಯೆಗೆ ಆಹಾರಸ್ವಾವಲಂಬನೆಯಿಂದ ಮಾತ್ರ ರಾಷ್ಟ್ರ ಸಂಪತ್ಭರಿತವಾಗಲು ಸಾದ್ಯಯೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾಧ್ಯಕ್ಷ ನವೀನ್ಚಂದ್ರ ಜೈನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರೀತ ಶೆಟ್ಟಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಸೀತಾರಾಮ ಗಾಣಿಗ, ಜಿಲ್ಲಾ ಪ್ರ.ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ಭಾರತೀಯ ಕಿಸಾನ್ ಸಂಘದ ಜಿಲ್ಲಾ ಉಪಾಧ್ಯಕ್ಷಾರಾದ ರಾಮಚಂದ್ರ ಆಲ್ಸೆ, ಶ್ರೀನಿವಾಸ ಭಟ್, ಕೋಶಾಧಿಕಾರಿ ವಾಸುದೇವಾ ಶ್ಯಾನುಭಾಗ್, ಮಹಿಳಾ ಪ್ರಮುಖರಾದ ನಿರ್ಮಲ, ಚಂದ್ರಹಾಸ ಶೆಟ್ಟ ಇನ್ನಾ ಉಪಸ್ಥಿತರಿದ್ದರು.
ನಂತರ ನಡೆದ ಕೃಷಿ ವಿಚಾರ ಗೋಷ್ಠಿಯಲ್ಲಿ ಕೃಷಿ ವಿಜ್ಙಾನ ಕೆಂದ್ರ ಬ್ರಹ್ಮಾವರದ ಹಿರಿಯ ವಿಜ್ಞಾನಿ ಡಾ. ಧನಂಜಯ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ವಿಚಾರ ಮಂಡನೆ ಮಾಡಿದರು. ಶಿವಮೊಗ್ಗ ಕೃಷಿ ವಿಶ್ವ ವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ಹಾಗೂ ಕೃಷಿ ಪ್ರಯೋಗ ಪರಿವಾರದ ವಿಶ್ವಸ್ತ ಅರುಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು,
ಬಳಿಕ ನಡೆದ ಸಮರೋಪ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಚಂದ್ರಕಾಂತ್ ರಾವ್ ಇನ್ನಾ ಸಮಾರೋಪದ ಮಾತುಗಳನ್ನಾಡಿದರು. ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಭಟ್ ಸಮ್ಮೇಳನದ ನಿರ್ಣಯಗಳನ್ನು ಮಂಡಿಸಿದರು. ಭಾರತೀಯ ಕಿಸಾನ್ ಸಂಘದ ನವೀನಚಂದ್ರ ಜೈನ್ , ಮಹಾಬಲ ಬಾಯಾರಿ ಆಲೂರು, ಸುಂದರಶೆಟ್ಟಿ ಮುನಿಯಾಲು, ಅನಂತಪದ್ಮನಾಭ ಉಡುಪ, ಮೋಹನದಾಸ ಅಡ್ಯಂತಾಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ದೀಪಕ್ ಪೈ ಪಲಿಮಾರು ಮೊದಲಾದವರು ಉಪಸ್ಥಿತರಿದ್ದರು.