ಅಡಿಕೆ ಸಂಶೋಧನಾ ಕೇಂದ್ರಕ್ಕೆ ಬಜೆಟ್ ನಲ್ಲಿ ವಿಶೇಷ ಅನುದಾನ: ಸಿಎಂ ಬೊಮ್ಮಾಯಿ

ಪುತ್ತೂರು, ಫೆ 11: ಅಡಿಕೆ ಸಂಶೋಧನಾ ಕೇಂದ್ರವನ್ನು ಗಟ್ಟಿಗೊಳಿಸಲು, ತಜ್ಞರ ಸಮಿತಿ ರಚಿಸಿ ಅಡಿಕೆ ರೋಗ ತಡೆಯುವಿಕೆಗೆ ಬಜೆಟ್ ನಲ್ಲಿ ವಿಶೇಷ ಅನುದಾನವನ್ನು ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕೇಂದ್ರ ಅಡಿಕೆ ಮತ್ತು ಕುಕ್ಕು ಮಾರಾಟ ಹಾಗೂ ಸಂಸ್ಕರಣಾ ಸಹಕಾರಿ ನಿಯಮಿತ (ಕ್ಯಾಂಪ್ಕೊ) ದ ಸುವರ್ಣ ಮಹೋತ್ಸವಕ್ಕೆ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅವರೊಂದಿಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯದಲ್ಲಿ ಸುಮಾರು 6.11ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಬಿಳಿಚುಕ್ಕಿ ರೋಗ ಅಡಿಕೆಗೆ ಬರುವ ರೋಗ ತಡೆಯಲು 10 ಕೊಟಿ ರೂ ನೀಡಲಾಗಿದೆ ಎಂದರು.

ಕಾನೆಬಾನೆ ಜಮೀನಿನ ರೈತರಿಗೆ ಪರಿಹಾರ: ಕಾನೆ ಬಾನೆ ಜಮೀನಿನಲ್ಲಿ ಅಡಿಕೆ ಬೆಳೆತುವ ರೈತರಿಗೂ ಪರಿಹಾರವನ್ಬು ಒದಗಿಸಲು ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ. ಕಾನೆಬಾನೆ, ಸೊಪ್ಪಿನಬೆಟ್ಟ ಜಮೀನಿನ ಸಮಸ್ಯೆಯಿರುವ ರೈತರಿಗೆ ಪರಿಹಾರವನ್ನು ಒದಗಿಸಲಾಗುವುದು. ಈ ಭಾಗದ ರೈತರೆಲ್ಲ ನಮ್ಮವರು ಎಂಬ ಬದ್ಧತೆ ನಮ್ಮ ಸರ್ಕಾರಕ್ಕಿದೆ ಎಂದರು.

26 ಸಾವಿರ ಮೆಟ್ರಿಕ್ ಟನ್ ಚಾಕಲೇಟ್ ಉತ್ಪಾದನೆ ಮಾಡುವ ಕ್ಯಾಂಪ್ಕೊ :

ಕ್ಯಾಂಪ್ಕೊ ಸಂಸ್ಥೆ ಜನರಿಂದ ಜನರಿಗೋಸ್ಕರ ಹುಟ್ಟಿರುವ ಸಂಸ್ಥೆ ಐವತ್ತು ವರ್ಷ ಯಶಸ್ವಿಯಾಗಿ ನಡೆದಿರುವುದು ಸಾಧನೆ, ಕ್ಯಾಂಪ್ಕೊ ಸ್ಥಾಪಕ ಸುಬ್ರಾಯ್ ಭಟ್ಟರಿಗೆ ಅಭಿನಂದನೆಗಳು, ಕ್ಯಾಪಿಟಲಿಸಂ, ಕಮುನಿಜಂ ನಡುವೆ ಕೊಆಪರೇಟಿಸಂ ಬೆಳೆಸುವುದು ಮುಖ್ಯ. ಜನರಿಂದ ಜನರಿಗಾಗಿ ಇರುವುದೇ ಸಹಕಾರಿ ರಂಗ. 1973 ರಲ್ಲಿ ಕ್ಯಾಂಪ್ಕೋ ಸಂಸ್ಥೆಯನ್ನು ಪ್ರಾರಂಭಿಸಿ, ಈ ಭಾಗದ ಪ್ರಮುಖ ಬೆಳೆಯಾದ ಅಡಿಕೆಗೆ ಮಾರುಕಟ್ಟೆ ರಕ್ಷಣೆಯನ್ನು ಸಂಸ್ಥೆ ನೀಡಿದೆ. 1980ರ ದಶಕದಲ್ಲಿ ಕೊಕೊ ಬೆಳೆಗಾರರಿಂದ ಖರೀದಿಸಿ ಚಾಕಲೇಟ್ ಫ್ಯಾಕ್ಟರಿಯನ್ನು ಪ್ರಾರಂಭಿಸಿ, ಇಂದು ಇಡೀ ದೇಶದಲ್ಲಿ 26 ಸಾವಿರ ಮೆಟ್ರಿಕ್ ಟನ್ ಚಾಕಲೇಟ್ ಉತ್ಪಾದನೆ ಮಾಡುವ ದೇಶದ ಏಕೈಕ ಸಂಸ್ಥೆಯಾಗಿದೆ. ಕಾಳುಮೆಣಸಿನ ಸಂಸ್ಕರಣೆ, ತೆಂಗಿನಕಾಯಿ ಎಣ್ಣೆ, ರಬ್ಬರ್ ಸೇರಿದಂತೆ ಆರ್ಥಿಕ ಭದ್ರತೆ ನೀಡುವ ಕೆಲಸ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಕ್ಯಾಮ್ಕೊ ಒಬ್ಬ ತಾಯಿಯಾಗಿ ಈ ಭಾಗದಲ್ಲಿ ಕೆಲಸ ಮಾಡುತ್ತಿದೆ. ನಮ್ಮ ಭಾಗದಲ್ಲಿಯೂ ಅಡಿಕೆ ಬೆಳೆ ವಿಸ್ತರಣೆಯಾಗುತ್ತಿದೆ ಎಂದರು.

ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಲ್ಲಿ ಸಹಕಾರಿ ರಂಗ ಪ್ರಮುಖ ಪಾತ್ರ :

ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ತಮ್ಮ ಗ್ರಾಮದ ಸೊಸೈಟಿಯ ಅಧ್ಯಕ್ಷರಾಗಿದ್ದಾರೆ‌. ಅವರಿಗೆ ಸಹಕಾರ ರಂಗದ ಬಗ್ಗೆ ಇರುವ ಬದ್ದತೆ ತೋರಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಮೃತ ಕಾಲದಲ್ಲಿ ನಮ್ಮ ದೇಶದ ಆರ್ಥಿಕತೆ ಐದು ಟ್ರಿಲಿಯನ್ ಡಾಲರ್ ಮಾಡುವ ಗುರಿ ಇದೆ. ಇದರಲ್ಲಿ ಸಹಕಾರಿ ರಂಗ ಪ್ರಮುಖ ಪಾತ್ರ ವಹಿಸಲಿದೆ.ನಮ್ಮ ಸರ್ಕಾರ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ‌‌. ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್ ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ರೈಲ್ವೆಗಾಗಿ 7500 ಕೋಟಿ ರೂ.ಗಳ ಅನುದಾನ ನೀಡಲಾಗಿದೆ ಎಂದರು.

ಗೃಹ ಸಚಿವ ಆರಗ ಜ್ಞಾನೇಂದ್ರ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವ ಎಸ್. ಅಂಗಾರ, ಸಹಕಾರ ಸಚಿವ ಸೋಮಶೇಖರ್, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದರಾದ ನಳಿನ್ ಕುಮಾರ್ ಕಟೀಲ್, ಸ್ಥಳೀಯ ಶಾಸಕರಾದ ಸಂಜೀವ ಮಠಂದೂರು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!