ಕಾರ್ಕಳ/ಬ್ರಹ್ಮಾವರ: ಪ್ರತ್ಯೇಕ ಪ್ರಕರಣ ಇಬ್ಬರ ಆತ್ಮಹತ್ಯೆ

ಕಾರ್ಕಳ/ಬ್ರಹ್ಮಾವರ, ಫೆ.4(ಉಡುಪಿ ಟೈಮ್ಸ್ ವರದಿ): ತಮ್ಮ ಅನಾರೋಗ್ಯದ ಕಾರಣಕ್ಕೆ ಮನನೊಂದು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಎರಡು ಪ್ರತ್ಯೇಕ ಘಟನೆ ಕಾರ್ಕಳ ಹಾಗೂ ಬ್ರಹ್ಮಾವರದಲ್ಲಿ ವರದಿಯಾಗಿದೆ.

ಉಡುಪಿ ತಾಲೂಕು, ಬೈರಂಪಳ್ಳಿ ಗ್ರಾಮದ ಹರಿಖಂಡಿಗೆ ಕೆರೆಹಾಡಿ ಮನೆ, ನಿವಾಸಿ ಮಹೇಶ ಬಿ.ಹೆಗ್ಡೆ(47)ಹಾಗೂ ಬ್ರಹ್ಮಾವರದ ಚೇರ್ಕಾಡಿ ಗ್ರಾಮದ ಸುಗಂಧಿ ಶೆಟ್ಟಿ (58) ಆತ್ಮಹತ್ಯೆ ಮಾಡಿಕೊಂಡವರು.

ಕಾರ್ಕಳ ಪೊಲೀಸ್ ಠಾಣಾ ವ್ಯಾಪ್ತಿಯ ನಲ್ಲೂರು ಗ್ರಾಮದ, ಗಾಂಧಿ ನಗರ ಎಂಬಲ್ಲಿರುವ ಕ್ಯಾಂಟಿನ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಮಹೇಶ ಬಿ.ಹೆಗ್ಡೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇದಕ್ಕಾಗಿ ಚಿಕಿತ್ಸೆ ಪಡೆದರೂ ಸರಿಯಾಗಿ ಗುಣವಾಗದೇ ಇದ್ದುದರಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಇಂದು ಬೆಳಿಗ್ಗೆ ತಾನು ಕೆಲಸ ಮಾಡುತ್ತಿದ್ದ ಕ್ಯಾಂಟೀನ್‌ನ ಒಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಮತ್ತೊಂದು ಪ್ರಕರಣದಲ್ಲಿ ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಮುಂಡ್ಕಿನಜೆಡ್ಡು ಸೋಣೆಕೊಡಿ ಹೌಸ್‌ ಎಂಬಲ್ಲಿ ಸುಗಂಧಿ ಶೆಟ್ಟಿ ಎಂಬವರು ತಮಗಿದ್ದ ಅನಾರೋಗ್ಯದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಇಂದು ಬೆಳಿಗ್ಗೆ ಮನೆಯ ಬಾವಿಗೆ ಹಾರಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಈ ಎರಡೂ ಘಟನೆಗೆ ಸಂಬಂಧಿಸಿ ಕಾರ್ಕಳ ಗ್ರಾಮಾಂತರ ಹಾಗೂ ಬ್ರಹ್ಮಾವರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್ : 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್- 4, ಬೆಂಗಳೂರು.

Leave a Reply

Your email address will not be published. Required fields are marked *

error: Content is protected !!