ವಾಮಂಜೂರಿನಲ್ಲಿ ಕೊಂಕಣಿ ಮಾನ್ಯತಾ ದಿನ ಮತ್ತು ಕಲಾಕುಲ್ ನಾಟಕ

“ಕೊಂಕಣಿಗೆ ಮಾನ್ಯತೆ ದೊರೆತುದರಿಂದ, ಮಹತ್ವದ ಕೆಲ ಬೆಳವಣಿಗೆಗಳು ಆಗಿವೆ. ಕೊಂಕಣಿಯನ್ನು ಸಮೃದ್ಧ ಭಾಷೆಯನ್ನಾಗಿಸುವ ಅವಕಾಶವನ್ನು ಸಂವಿಧಾನದ ಎಂಟನೇ ಪರಿಚ್ಛೇದ ಕೇಂದ್ರ, ರಾಜ್ಯ ಸರಕಾರ ಹಾಗೂ ಕೊಂಕಣಿಗರಿಗೆ ನೀಡಿದೆ. ಕೊಂಕಣಿಯಲ್ಲಿ ಯುಪಿಎಸ್‌ಸಿ (ಐಎಎಸ್/ಐಪಿಎಸ್ ಇತ್ಯಾದಿ) ಪರೀಕ್ಷೆಗಳನ್ನು ಬರೆಯವ ಅವಕಾಶ ಲಭಿಸಿದೆ” ಎಂದು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕವಿ ಮೆಲ್ವಿನ್ ರೊಡ್ರಿಗಸ್ ಹೇಳಿದರು.

ಅವರು 25.08.2019 ರಂದು ವಾಮಂಜೂರಿನ ಶ್ರಮಿಕ ಸಂತ ಜೊಸೆಫ್ ಚರ್ಚ್ ವತಿಯಿಂದ, ಸಾಂಗಾತಿ ವಾಮಂಜೂರ್ ಸಹಕಾರದಲ್ಲಿ, ಚರ್ಚ್ ಸಭಾಂಗಣದಲ್ಲಿ ನಡೆದ ಕೊಂಕಣಿ ಮಾನ್ಯತಾ ದಿನಾಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು.

“22 ರಾಷ್ಟ್ರೀಯ ಭಾಷೆಗಳಲ್ಲಿ ಒಂದಾದ ಕೊಂಕಣಿಯು ಸರಕಾರಿ ವ್ಯವಸ್ಥೆಯ ವಿವಿಧ ಸ್ತರಗಳಲ್ಲಿ ಬಳಸಲ್ಪಡುತ್ತದೆ. ಜನಪ್ರತಿನಿಧಿಗಳಿಗೆ ವಿಧಾನಮಂಡಲ, ಸಂಸತ್ತುಗಳಲ್ಲಿ, ನಾಗರಿಕರಿಗೆ ಸರಕಾರಿ ಕಛೇರಿಗಳಲ್ಲಿ ಅಧಿಕೃತವಾಗಿ ಕೊಂಕಣಿಯನ್ನು ಉಪಯೋಗಿಸುವ ಅವಕಾಶವಿದೆ. ಸಾಹಿತ್ಯ ರಚನೆ, ಅನುವಾದದ ಬೆಳವಣಿಗೆಗೆ ವಿಫುಲ ಅವಕಾಶಗಳು ತೆರೆದಿವೆ. ಕೊಂಕಣಿಯಲ್ಲಿ ಶಿಕ್ಷಣ, ಉನ್ನತ ಶಿಕ್ಷಣ, ಶಿಕ್ಷಕರಿಗೆ ನೌಕರಿ ಇತ್ಯಾದಿ ಕೆಲಸಗಳು ವೇಗ ಪಡೆಯಬೇಕಾಗಿದೆ. ಕೊಂಕಣಿಗರಿಗೆ ದೊರೆತ ವಿವಿಧ ಸೌಲಭ್ಯಗಳನ್ನು ಸೂಕ್ತ ಸಂದರ್ಭದಲ್ಲಿ ಪಡೆಯಬಹುದು ಆದರೆ ಎಲ್ಲಕ್ಕಿಂತ ಮೊದಲು ಕೊಂಕಣಿತನವನ್ನು ಹೃದಯದಲ್ಲಿ ಪೋಷಿಸಿ ಬೆಳೆಸಬೇಕು. ಮನೆಗಳಲ್ಲಿ ಖಂಡಿತವಾಗಿ ಹಾಗೂ ಹೊರಗಡೆ ಸಾಧ್ಯವಿರುವೆಡೆ ಕೊಂಕಣಿ ಬಳಸಬೇಕು. ಮಕ್ಕಳಲ್ಲಿ ಕೊಂಕಣಿ ಪ್ರೇಮವನ್ನು ಬೆಳೆಸಬೇಕು. ಕೊಂಕಣಿ ಕಾರ್ಯಕ್ರಮಗಳು, ಕಲಾವಿದರು, ಸಾಹಿತ್ಯ, ಪತ್ರಿಕೆಗಳನ್ನು ಪ್ರೋತ್ಸಾಹಿಸಬೇಕು. ಆಗ ಕೊಂಕಣಿ ವಿಕಸಿಸುತ್ತದೆ, ಮಾನ್ಯತೆಗೆ ಸಾರ್ಥಕತೆ ಬರುತ್ತದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಚರ್ಚ್ ಉಪಾಧ್ಯಕ್ಷ ಸುನೀಲ್ ಪಿಂಟೊ ಕೃಷಿ ಸಂಸ್ಕೃತಿಯನ್ನು ಬಿಂಬಿಸುವ ಅಕ್ಕಿಯಲ್ಲಿ ಕೊಂಕಣಿ ಬಾವುಟವನ್ನು ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು. ಅನಿವಾರ್ಯ ಕಾರಣದಿಂದ, ಕಾರ್ಯಕ್ರಮದಲ್ಲಿ ಭಾಗವಹಿಸಲು ಅಸಾಧ್ಯವಾದ ಚರ್ಚ್ ಧರ್ಮಗುರು ವಂ ಸಿಪ್ರಿಯನ್ ಪಿಂಟೊ ಕಳುಹಿಸಿದ ಸಂದೇಶವನ್ನು ವಾಚಿಸಿ, ಶುಭ ಹಾರೈಸಿದರು

ಈ ಸಂದರ್ಭದಲ್ಲಿ ಸೃಜನಾ ಪ್ರಕಾಶನ ಪ್ರಕಟಿಸಿದ, ಡೇವಿಡ್ ಡಿಸೋಜ ವಾಮಂಜೂರ್ ರಚಿತ `ತಪ್ಕಟೆ ಫುಲಾಂ’ ಕಾದಂಬರಿ ಯನ್ನು ಮೆಲ್ವಿನ್ ರಾಡ್ರಿಗಸ್ ಲೋಕಾರ್ಪಣೆ ಮಾಡಿದರು.  ಪ್ರಕಾಶಕ್ ವಿತೊರಿ ಕಾರ್ಕಳ ಪುಸ್ತಕ ಪರಿಚಯ ಮಾಡಿದರು. ಡೇವಿಡ್ ಹಾಗೂ ಮೆಲ್ವಿನ್ ಇವರನ್ನು ಗೌರವಿಸಲಾಯಿತು.

ಗೌರವ ಅತಿಥಿ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ ಹಾಗೂ ಸಂತ ಆಗ್ನೆಸ್ ಕಾಲೇಜಿನ ರಿಜಿಸ್ಟ್ರಾರ್ ಚಾರ್ಲ್ಸ್ ಪಾಯ್ಸ್ ಉಪಸ್ಥಿತರಿದ್ದರು.

ಆರಂಭಕ್ಕೆ ಸಿಪ್ರಿಯನ್ ಮತ್ತು ರೋಶನ್ ಪ್ರಾರ್ಥನಾ ಗೀತೆ ಹಾಡಿದರು. ರೊವಿಟಾ, ಅಂಕಿತಾ ಮತ್ತು ಸಂಧ್ಯಾ ಸ್ವಾಗತ ನೃತ್ಯ ಮಾಡಿದರು. ಲಾರೆನ್ಸ್ ಡಿಸೋಜ ಪ್ರಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ರೋಶನ್ ಮಿನೇಜಸ್ ನಿರೂಪಿಸಿ, ವಂದಿಸಿದರು.

ಗಣ್ಯರಿಗೆ ನೆನಪಿನ ಕಾಣಿಕೆಯಾಗಿ ಬಿರುಂಡಿ/ ಪುನರ್‍ಪುಳಿ ಗಿಡ ನೀಡಲಾಯಿತು. ಸಭಾ ಕಾರ್ಯಕ್ರಮದ ಕೊನೆಗೆ ಸರ್ವರಿಗೂ ಅರಸಿನ ಎಲೆಯ ಗಟ್ಟಿ/ಕಡುಬು ಹಾಗೂ ಕಾಫಿ ನೀಡಿ ಸತ್ಕರಿಸಿದರು.

ನಂತರ ಅರುಣ್ ರಾಜ್ ರಾಡ್ರಿಗಸ್ ಬರೆದು ನಿರ್ದೇಶಿಸಿದ, ಕಲಾಕುಲೋತ್ಸವ್ 2019 ಇದರ ಎರಡನೇ ನಾಟಕ `ಪೇಯಿಂಗ್ ಗೆಸ್ಟ್’ ಕಲಾಕುಲ್ ಕಲಾವಿದರಿಂದ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *

error: Content is protected !!