ಆದಾಯ ತೆರಿಗೆ ಇಲಾಖೆಯಿಂದ ಸೈಕಲ್ ರಿಕ್ಷಾಚಾಲಕನಿಗೆ ಬಿಗ್ ಶಾಕ್…!

ಮಥುರಾ ಅ.25 : ಬಡ ಸೈಕಲ್ ರಿಕ್ಷಾ ಚಾಲಕರೊಬ್ಬರಿಗೆ ಬರೋಬ್ಬರಿ 3 ಕೋಟಿ ರೂ. ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಇದೀಗ ಆದಾಯ ತೆರಿಗೆ ಇಲಾಖೆಯ ನೋಟಿಸ್ ನಿಂದ ಕಂಗಾಲಾಗಿರುವ ಸೈಕಲ್ ರಿಕ್ಷಾ ಚಾಲಕ ಅಮರ್ ಕಾಲೋನಿ ನಿವಾಸಿ ಪ್ರತಾಪ್ ಸಿಂಗ್ ಅವರು ನ್ಯಾಯಕ್ಕಾಗಿ ಪೊಲೀಸ್ ಮೆಟ್ಟಿಲೇರಿದ್ದು, ಹೆದ್ದಾರಿ ಪೊಲೀಸ್ ಠಾಣೆಯಲ್ಲಿ ತನಗೆ ವಂಚನೆಯಾಗಿದೆ ಎಂದು ದೂರು ನೀಡಿದ್ದಾರೆ.

ಈ ಬಗ್ಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿರುವ ಅವರು, ಬ್ಯಾಂಕ್ ನವರು ಐ.ಟಿ ರಿಟರ್ನ್ ದಾಖಲೆ ಕೇಳಿದ್ದರಿಂದ ಜನ್ ಸುವಿಧಾ ಕೇಂದ್ರದಲ್ಲಿ ಪಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದೆ. ನಂತರ ಸಂಜಯ್ ಸಿಂಗ್ ಎಂಬವರು ಪಾನ್ ಕಾರ್ಡ್‍ವೊಂದರ ನಕಲು ಪ್ರತಿಯನ್ನು ನೀಡಿದ್ದರು. ತಾನು ಅನಕ್ಷರಸ್ಥನಾದ್ದರಿಂದ ಮೂಲ ಪಾನ್ ಕಾರ್ಡ್ ಹಾಗೂ ತನಗೆ ದೊರೆತ ನಕಲು ಪ್ರತಿಯ ವ್ಯತ್ಯಾಸ ತಿಳಿಯಲಿಲ್ಲ. ಇದೀಗ 3,47,54,896 ರೂ. ತೆರಿಗೆ ಪಾವತಿಸುವಂತೆ ಐಟಿ ಇಲಾಖೆಯಿಂದ ನೋಟಿಸ್ ಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಯಾರೋ ನಿಮ್ಮನ್ನು ಯಾಮಾರಿಸಿ ಜಿಎಸ್‍ಟಿ ಸಂಖ್ಯೆ ಪಡೆದಿದ್ದಾರೆ. 2018-2019ರಲ್ಲಿ ಅವರ ವಹಿವಾಟು 43,44,36,201 ರೂ. ಆಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದರಲ್ಲದೆ, ಎಫ್‍ಐಆರ್ ದಾಖಲಿಸುವಂತೆ ಸಲಹೆ ನೀಡಿದರು ಎಂದು ರಿಕ್ಷಾ ಚಾಲಕ ತನಗಾದ ವಂಚನೆ ಕುರಿತು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಇನ್ನು ಈ ಕುರಿತಾಗಿ ಪ್ರತಿಕ್ರಿಯಿಸಿರುವ ಠಾಣೆಯ ಅಧಿಕಾರಿ (ಎಸ್‍ಎಚ್‍ಒ) ಅಂಜು ಕುಮಾರ್ ಅವರು, ಪ್ರತಾಪ್ ಸಿಂಗ್ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿಲ್ಲ. ಸಮಸ್ಯೆ ಕುರಿತು ಗಮನಹರಿಸಲಾಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!