ಗುರುಗಳಲ್ಲಿ ಭಕ್ತಿ, ಶ್ರದ್ಧೆ, ನಂಬಿಕೆ, ಶರಣಾಗತಿಯಿಂದ ಯಶಸ್ಸು ಸಾಧ್ಯ: ವಸಂತ್ ಕುಮಾರ್
ಬ್ರಹ್ಮಾವರ: ಇಂದು ಗುರುಪೂರ್ಣಿಮೆಯ ಪ್ರಯುಕ್ತ ರಾಷ್ಟ್ರೋತ್ಥಾನ ಪದವಿ ಪೂರ್ವ ಕಾಲೇಜು ಚರ್ಕಾಡಿ, ಬ್ರಹ್ಮಾವರದಲ್ಲಿ ಪವಿತ್ರ ಗುರುಪೂರ್ಣಿಮಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ವಸಂತ್ ಕುಮಾರ್ ಎಂ ಎಸ್ ಅವರು ಗುರು ವ್ಯಾಸ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಹಾಗೂ ರಾಷ್ಟ್ರೋತ್ಥಾನ ಪದವಿ ಪೂರ್ವ ಕಾಲೇಜಿನ ಸಂಚಾಲಕರಾದ ವಸಂತ್ ಕುಮಾರ್ ಎಂ ಎಸ್, “ಗುರು ಎನ್ನುವವನು ತ್ರಿಮೂರ್ತಿಗಳಿಗೆ ಸಮಾನ. ಗುರುವಿನ ಸ್ಥಾನ ಭಾರತೀಯ ಸಂಸ್ಕೃತಿಯಲ್ಲಿ ಅತ್ಯುನ್ನತ ಗೌರವವನ್ನು ಹೊಂದಿದೆ. ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಶರಣಾಗತಿಯಾದಾಗ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ. ತಮ್ಮ ಗುರುಗಳಲ್ಲಿ ಶ್ರದ್ಧೆ, ಭಕ್ತಿ, ನಂಬಿಕೆಗಳಿದ್ದಾಗ ಯಾವುದೇ ಕಾರ್ಯ ಸಾಧನೆಗಳನ್ನು ಸುಲಭವಾಗಿ ಜಯಿಸಲು ಸಾಧ್ಯ” ಎಂದರು.
ನಂತರ ವಿದ್ಯಾರ್ಥಿಗಳಿಂದ ಗುರುವಷ್ಟಕ ಮಂತ್ರ ಪಠಿಸುವುದರ ಮೂಲಕ ಸಾಮೂಹಿಕವಾಗಿ ತಮ್ಮ ಗುರುಗಳಿಗೆ ಗುರುವಂದನೆ ಸಲ್ಲಿಸಲಾಯಿತು. ನೃತ್ಯ, ವೇದ, ಮಂತ್ರ ಪಠಣಗಳೊಂದಿಗೆ ಅರ್ಥಪೂರ್ಣವಾಗಿ ಗುರುಪೂರ್ಣಿಮೆಯನ್ನು ಆಚರಿಸಲಾಯಿತು.
ವೇದಿಕೆಯಲ್ಲಿ ರಾಷ್ಟ್ರೋತ್ಥಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಭಾಗ್ಯಶ್ರೀ ಐತಾಳ್, ಆಡಳಿತ ಅಧಿಕಾರಿಗಳಾದ ಸುರೇಶ್ ಹೆಜಮಾಡಿ ಉಪಸ್ಥಿತರಿದ್ದರು. ಕನ್ನಡ ಭಾಷಾ ಉಪನ್ಯಾಸಕ ರಮೇಶ್ ಸ್ವಾಗತಿಸಿ, ಹಿಂದಿ ಭಾಷಾ ಉಪನ್ಯಾಸಕಿ ವಿಜಯಲಕ್ಷ್ಮಿ ವಂದನಾರ್ಪಣೆಗೈದರು. ಸಂಸ್ಕೃತ ಭಾಷಾ ಉಪನ್ಯಾಸಕ ಪ್ರಸಾದ್ ದೇಶಪಾಂಡೆ ಇವರು ಕಾರ್ಯಕ್ರಮ ನಿರೂಪಿಸಿದರು.





