ಬಡತನದ ಕಾರಣಕ್ಕೆ ತನ್ನದೇ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ
ನೆಲಮಂಗಲ: ಬಡತನದ ಕಾರಣಕ್ಕೆ ತಾಯಿಯೊಬ್ಬಳು 45 ದಿನದ ತನ್ನ ಮಗುವನ್ನು ನೀರಿನ ಹಂಡೆಯಲ್ಲಿ ಮುಳುಗಿಸಿ ಕೊಂದಿರುವ ಘಟನೆ ನೆಲಮಂಗಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತನ್ನದೇ ಮಗುವನ್ನು ಕೊಂದಿರುವ ಆರೋಪಿಯನ್ನು ನಗರದ ವಿಶ್ವೇಶ್ವರಪುರದಲ್ಲಿ ವಾಸವಾಗಿದ್ದ ರಾಧಾ ಎಂದು ಗುರುತಿಸಲಾಗಿದೆ.
ರಾಧಾ ಹಾಗೂ ಪವನ್ ದಂಪತಿಗಳಿಗೆ ಗಂಡು ಮಗು ಜನಿಸಿದ್ದು, ಪವನ್ ಕುಡುಕನಾಗಿದ್ದು, ರಾತ್ರಿ ತಾನು ಓಡಿಸುತ್ತಿದ್ದ ಆಟೋದಲ್ಲಿಯೇ ಮಲಗುತ್ತಿದ್ದ ಎನ್ನಲಾಗಿದೆ. ಈ ಕಾರಣಕ್ಕೆ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿದ್ದವು ಎನ್ನಲಾಗಿದ್ದು, ಕುಡುಕ ಗಂಡ, ಎದೆಹಾಲಿನ ಕೊರತೆ ಹಾಗೂ ಬಡತನ ಮುಂತಾದ ಕಾರಣಗಳಿಂದ ಮಗುವನ್ನು ಕೊಂದಿರುವುದಾಗಿ ಆರೋಪಿ ರಾಧಾ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.





