ಸುಮನಸಾದ ಶಿಸ್ತು ಎಲ್ಲರಿಗೂ ಮಾದರಿ: ಜಯಕರ ಶೆಟ್ಟಿ ಇಂದ್ರಾಳಿ

ಉಡುಪಿ ಮಾ.1 (ಉಡುಪಿ ಟೈಮ್ಸ್ ವರದಿ) : ಸುಮನಸಾ ಸಂಘಟನೆಯ ಶಿಸ್ತು, ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿ ಎಂದು ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಭುಜಂಗಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 12ನೇ ವರ್ಷದ ರಂಗಹಬ್ಬದ 6ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಜನರು ಇಂಥ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಕಡಿಮೆಯಾಗಿದೆ. ಇಂಥ ಸಂದರ್ಭದಲ್ಲಿ 60ಕ್ಕೂ ಅಧಿಕ ಯುವಜನರನ್ನು ಒಂದೆಡೆ ಸೇರಿಸಿಕೊಂಡು ಅವರ ಪ್ರತಿಭೆಗಳನ್ನು ಅನಾವರಣಗೊಳಿಸಲು ಅವಕಾಶ ನೀಡುತ್ತಾ, ಸಮಾಜದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಗೌರವಿಸುತ್ತಾ ಬಂದಿರುವುದು ಮಹತ್ವದ ಕೆಲಸ ಎಂದು ಶ್ಲಾಘಿಸಿದರು.

ಹಾಗೂ ಶಿಕ್ಷಣದ ಬಗ್ಗೆ, ರಂಗಶಿಕ್ಷಣದ ಬಗ್ಗೆ, ಸಮಾಜದ ಬಗ್ಗೆ ಚಿಂತನೆಯನ್ನು ಇಟ್ಟುಕೊಂಡು ಕೆಲಸ ಮಾಡುತ್ತಿರುವ ಸುಮನಸಾ ಸಂಘಟನೆಯು ರಾಜ್ಯ ಮತ್ತು ದೇಶದ ವಿವಿಧ ಕಡೆಗಳಿಂದ ರಂಗತಂಡಗಳನ್ನು ಕರೆಸಿ ಅಲ್ಲಿನ ಸಾಂಸ್ಕೃತಿಕ ಜಗತ್ತನ್ನು ಇಲ್ಲಿನ ಜನರಿಗೆ ಪರಿಚಯಿಸುತ್ತಾ ಬಂದಿದೆ. ಪುಟ್ಟ ಮಕ್ಕಳಲ್ಲಿ ರಂಗಶಿಸ್ತು ಮೂಡಿಸುವ ಕೆಲಸ ಇಲ್ಲಿ ನಡೆಯುತ್ತಿದೆ. ಎಲ್ಲ ರಂಗ ಸಂಘಟನೆಗಳಿಗೆ ಇದು ಮಾದರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಲಾವಿದ ಮಧುಕರ ಸನೀಲ್ ಉದ್ಯಾವರ ಅವರಿಗೆ ರಂಗಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು. ಇದೇ ವೇಳೆ ‘ಸಮುದಾಯ ಬೆಂಗಳೂರು’ ಕಲಾವಿದರಿಂದ ‘ಕರಿಯ ದೇವರ ಹುಡುಕಿ’ ನಾಟಕ ಪ್ರದರ್ಶನಗೊಂಡಿತು.

ಈ ಸಂದರ್ಭದಲ್ಲಿ ಮಲ್ಪೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ. ಬಂಗೇರ, ಉಡುಪಿ ನಗರಸಭೆ ವಿಪಕ್ಷ ನಾಯಕ ರಮೇಶ್ ಕಾಂಚನ್, ಮುದ್ರಣ ಮಾಲೀಕರ ಸಂಘದ ಕಾಪು ವಲಯ ಅಧ್ಯಕ್ಷ ಸುಧೀರ್ ಡಿ. ಬಂಗೇರ, ಕೀಳಂಜೆ ಬಿ.ವಿ. ಹೆಗ್ಡೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸಖಾರಾಮ್ ಶೆಟ್ಟಿ, ಕೊಡವೂರು ಉದ್ಯಮಿ ರಾಮಚಂದ್ರ ಕರ್ಕೇರ, ಕರಾವಳಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಉಮೇಶ್ ಶೆಟ್ಟಿ, ಮಲ್ಪೆ ಉದ್ಯಮಿ ಪ್ರಕಾಶ್ ಬಂಗೇರ, ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ., ದಿವಾಕರ್ ಕಟೀಲ್, ಅಶೋಕ್ ಅಮ್ಮುಂಜೆ ಉಪಸ್ಥಿತರಿದ್ದರು.

ಯೋಗೀಶ್ ಕೊಳಲಗಿರಿ ಸ್ವಾಗತಿಸಿದರು. ಶ್ರೀವತ್ಸ ರಾವ್ ವಂದಿಸಿದರು. ಅಕ್ಷತ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!