ಬದ್ಧತೆ ಇದ್ದರೆ ತಕ್ಷಣ ಸಂಪುಟ ಸಭೆಯಲ್ಲಿ ವರದಿ ಸ್ವೀಕರಿಸಿ, ಚರ್ಚೆಗೆ ವಿಶೇಷ ಅಧಿವೇಶನ ಕರೆಯಿರಿ – ಸಿಎಂಗೆ ಶಾಸಕ ಸುನಿಲ್ ಸವಾಲ್

ಉಡುಪಿ ಫೆ.29(ಉಡುಪಿ ಟೈಮ್ಸ್ ವರದಿ): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬದ್ಧತೆ ಇದ್ದರೆ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ತಕ್ಷಣ ಸಂಪುಟ ಸಭೆಯಲ್ಲಿ ವರದಿ ಸ್ವೀಕರಿಸಿ, ಚರ್ಚೆ ನಡೆಸುವುದಕ್ಕೆ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಿರಿ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು ಮುಖ್ಯಮಂತ್ರಿಗೆ ಸವಾಲ್ ಹಾಕಿದ್ದಾರೆ.

ಈ ವಿಚಾರವಾಗಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹತ್ತು ವರ್ಷಗಳ ಸುದೀರ್ಘ ವನವಾಸದ ಬಳಿಕ ಹಿಂದುಳಿದ ವರ್ಗಗಳ ಆಯೋಗದಿಂದ ಸಿಎಂ ಸಿದ್ದರಾಮಯ್ಯ ಅವರು ಸ್ವೀಕರಿಸಿರುವ ವರದಿಯ ಸ್ವರೂಪ ಏನೆಂಬುದು‌ ಮೊದಲು‌ ನಿರ್ಧಾರವಾಗಬೇಕಿದೆ. 150 ಕೋಟಿ ರೂ.ಗೂ ಹೆಚ್ಚು ಹಣ ಖರ್ಚು ಮಾಡಿರುವ ರಾಜ್ಯ ಸರ್ಕಾರ ಸಮಾಜದಲ್ಲಿ ಅಂತಿಮವಾಗಿ ಗೊಂದಲವನ್ನು ಸೃಷ್ಟಿ ಮಾಡಿದೆ. ಈ ವರದಿ ಜಾರಿಗೆ ಮುನ್ನ ವಿಸ್ತೃತ ಚರ್ಚೆಯ ಅಗತ್ಯವಿದೆ. ಹೀಗಾಗಿ ಶಾಸನ ಸಭೆಯಲ್ಲಿ ವರದಿಯನ್ನು ಮಂಡಿಸಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕಾದದ್ದು ಸರ್ಕಾರದ ಕರ್ತವ್ಯ ಎಂದು ಹೇಳಿದ್ದಾರೆ. ಹಾಗೂ ಇದು ಜಾತಿಗಣತಿಯೋ ? ಶೈಕ್ಷಣಿಕ ಸಮೀಕ್ಷೆಯೋ ? ಅಥವಾ ಆರ್ಥಿಕ ಸಮೀಕ್ಷೆಯೋ ? ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದಿದ್ದಾರೆ.

ಈ ವರದಿಯ ವಿಚಾರದಲ್ಲಿ ದಶಮಾನದ ಗೊಂದಲ ಸೃಷ್ಟಿಸಿದ ಸಿದ್ದರಾಮಯ್ಯನವರು ವರದಿಯನ್ನು ಸ್ವೀಕರಿಸಿ ಕೈ ತೊಳೆದುಕೊಂಡರೆ ಸಾಲುವುದಿಲ್ಲ. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡದ ಆಶಯಕ್ಕೆ ಆಯೋಗ ಎಷ್ಟರಮಟ್ಟಿಗೆ ಸ್ಪಂದಿಸಿದೆ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ. ಮಾನ್ಯ ಸಿದ್ದರಾಮಯ್ಯನವರೇ ನಿಮಗೆ ಬದ್ಧತೆ ಇದ್ದಿದ್ದರೆ ರಾಜ್ಯಪಾಲರ ಭಾಷಣ ಮುಗಿದ ತಕ್ಷಣವೇ ವರದಿಯನ್ನು ಸ್ವೀಕರಿಸಿ ಸದನದಲ್ಲಿ ಮಂಡಿಸಬೇಕಿತ್ತು. ಆದರೆ ನಿಮ್ಮ ಉದ್ದೇಶ ಗೊಂದಲವನ್ನು ಜೀವಂತವಾಗಿಡುವುದಷ್ಟೇ ಆಗಿದೆ. ಹೀಗಾಗಿ ಅಧಿವೇಶನದ ಕೊನೆಯ ದಿನ ವರದಿ ಸ್ವೀಕರಿಸಿದ್ದೀರಿ. ಈ ಪಲಾಯನವಾದ ಸಾಕು. ಬದ್ಧತೆ ಇದ್ದರೆ ತಕ್ಷಣ ಸಂಪುಟ ಸಭೆಯಲ್ಲಿ ವರದಿ ಸ್ವೀಕರಿಸಿ, ಚರ್ಚೆ ನಡೆಸುವುದಕ್ಕೆ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಿರಿ. ಮೊದಲು ಗೊಂದಲಗಳಿಗೆ ಮೊದಲು ತೆರೆ ಬೀಳಲಿ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!