ಗಂಗೊಳ್ಳಿ: ನಿಯಂತ್ರಣ ತಪ್ಪಿದ ರಿಕ್ಷಾ ಮರಕ್ಕೆ ಡಿಕ್ಕಿ- ಪ್ರಯಾಣಿಕ ಮೃತ್ಯು
ಗಂಗೊಳ್ಳಿ ಮೇ 29 (ಉಡುಪಿ ಟೈಮ್ಸ್ ವರದಿ): ಚಾಲಕನ ನಿಯಂತ್ರಣ ತಪ್ಪಿದ ಆಟೋ ರಿಕ್ಷಾವೊಂದು ಮರಕ್ಕೆ ಡಿಕ್ಕಿ ಹೊಡೆದು ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಮೊವಾಡಿ –ತ್ರಾಸಿ ರಸ್ತೆಯಲ್ಲಿ ನಡೆದಿದೆ.
ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಭಾಸ್ಕರ ಮೃತಪಟ್ಟವರು. ನಿನ್ನೆ ಮೊವಾಡಿ –ತ್ರಾಸಿ ಡಾಮಾರು ರಸ್ತೆಯಲ್ಲಿ ಆಟೋ ರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗೂರಕತೆಯಿಂದ ಚಲಾಯಿಸಿಕೊಂಡು ಬಂದ ಅದರ ಚಾಲಕ ಗುರುರಾಜ ಪೂಜಾರಿ ಒಮ್ಮೇಲೆ ಬ್ರೇಕ್ ಹಾಕಿದ್ದು ಆಟೋ ರಿಕ್ಷಾ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿರುವ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಾಯಗೊಂಡ ಚಾಲಕ ಗುರುರಾಜ ಪೂಜಾರಿ ಹಾಗೂ ಪ್ರಯಾಣಿಕ ಭಾಸ್ಕರ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಗಾಯಾಳು ಭಾಸ್ಕರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರ ಭಾಸ್ಕರ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.