ಕೊಲ್ಲೂರು: ವ್ಯಕ್ತಿಯ ಮುಖಕ್ಕೆ ಖಾರದ ಪುಡಿ ಎರಚಿ ನಗದು ಸುಲಿಗೆ
ಕೊಲ್ಲೂರು ಮೇ 28 (ಉಡುಪಿ ಟೈಮ್ಸ್ ವರದಿ): ಮುಖಕ್ಕೆ ಖಾರದ ಪುಡಿ ಎರಚಿ ಬೈಕ್ ಸವಾರರೊಬ್ಬರ ಬಳಿ ಇದ್ದ ನಗದು ದೋಚಿರುವ ಘಟನೆ ಕೆರಾಡಿ ಗ್ರಾಮದ ಚಪ್ಪರಮಕ್ಕಿ ಎಂಬಲ್ಲಿ ನಡೆದಿದೆ.
ಹೊಸೂರು ಗ್ರಾಮದ ಹರೀಶ ಎಂಬವರು ನಿನ್ನೆ ತಮ್ಮ ದ್ವಿಚಕ್ರ ವಾಹನದಲ್ಲಿ ಉಡುಪಿಯಿಂದ ತನ್ನ ಮನೆಯಾದ ಹೊಸುರಿಗೆ ಹೋಗುತ್ತಿದ್ದ ವೇಳೆ ಕೆರಾಡಿ ಗ್ರಾಮದ ಚಪ್ಪರಮಕ್ಕಿ ಎಂಬಲ್ಲಿ ಮೊಬೈಲ್ ನೋಡಲು ರಸ್ತೆ ಬದಿಯಲ್ಲಿ ನಿಲ್ಲಿಸಿಕೊಂಡಿದ್ದರು. ಈ ವೇಳೆ ಚಪ್ಪರಮಕ್ಕಿ ಕಡೆಯಿಂದ ಬೆಳ್ಳಾಲ ಕಡೆಗೆ ಮತ್ತೊಂದು ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಹರೀಶ ಅವರ ಮುಖಕ್ಕೆ ಮೆಣಸಿನ ಪುಡಿ ಎರಚಿ ಹಲ್ಲೆ ನಡೆಸಿ ಅಂಗಿಯನ್ನು ಹರಿದು ಅವರ ಪರ್ಸ್ನಲ್ಲಿ ಇದ್ದ 5000 ರೂ. ಹಣವನ್ನು ಕಸಿದು ಪರಾರಿಯಾಗಿದ್ದಾರೆ ಎಂಬುದಾಗಿ ಹರೀಶ ಅವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.