ಶಂಕರನಾರಾಯಣ: ಜಾಗದ ತಕರಾರು-ಪ್ರತ್ಯೇಕ 2 ದೂರು ದಾಖಲು
ಶಂಕರನಾರಾಯಣ ಮಾ.29 (ಉಡುಪಿ ಟೈಮ್ಸ್ ವರದಿ): ಆಜ್ರಿ ಗ್ರಾಮದ ಚೌಕುಳಮಕ್ಕಿ ಎಂಬಲ್ಲಿ ಜಾಗದ ತಕರಾರಿನ ವಿಚಾರವಾಗಿ ನಡೆದ ಗಲಾಟೆಗೆ ಸಂಬಂಧಿಸಿ ಶಂಕರ ನಾರಾಯಣ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.
ಈ ಬಗ್ಗೆ ಲಕ್ಷೀ ಪೂಜಾರ್ತಿ ಎಂಬವರು ನೀಡಿದ ದೂರಿನ ಪ್ರಕಾರ, ಇವರ ಮಗಳು ಸವಿತಾ ರವರು ಆಜ್ರಿ ಗ್ರಾಮದ ಚೌಕುಳಮಕ್ಕಿ ಎಂಬಲ್ಲಿ ಹೊಸದಾಗಿ ಮನೆ ಕಟ್ಟುತ್ತಿದ್ದು ಅವರು ಮನೆ ಕಟ್ಟುವ ಜಾಗವು ಆರೋಪಿತ ರಾಮ ಪೂಜಾರಿ, ರಮೇಶ ಪೂಜಾರಿ ಮತ್ತು ಕೃಷ್ಣ ಪೂಜಾರಿ ವಾಸ, ಆಜ್ರಿ ಗ್ರಾಮ ಇವರುಗಳ ಜಾಗ ಎಂದು ತಕರಾರು ಮಾಡಿ ಸವಿತಾ ರವರಿಗೆ ಮನೆ ಕಟ್ಟದಂತೆ ತೊಂದರೆ ಮಾಡಿದ್ದಾರೆ. ಅಲ್ಲದೆ ಇದೇ ವಿಷಯದಲ್ಲಿ ಆರೋಪಿಗಳು ಕೋಪಗೊಂಡು ಮಾ.17 ರಂದು ಸವಿತಾ ಅವರ ತಾಯಿ ಲಕ್ಷೀ ಅವರು ಮನೆಯಲ್ಲಿ ಇರುವಾಗ ಆರೋಪಿಗಳು ಮನೆಯ ಒಳಗಡೆ ಅಕ್ರಮ ಪ್ರವೇಶ ಮಾಡಿ ಮರದ ಕೋಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಹಾಗೂ ಇದೇ ಘಟನೆಗೆ ಸಂಬಂಧಿಸಿ ಬೇಬಿ ಪೂಜಾರ್ತಿ ಅವರು ನೀಡಿದ ದೂರಿನಂತೆ, ಇವರಿಗೂ ಆರೋಪಿತ ಲಕ್ಷೀ ಪೂಜಾರಿ, ಶಂಕರ ಪೂಜಾರಿ, ಅಣ್ಣಪ್ಪ ಪೂಜಾರಿ, ಗೋಪಾಲ ಪೂಜಾರಿ, ಉಮಾಪತಿ, ಉದಯ ಪೂಜಾರಿ ಇವರುಗಳಿಗೂ ಜಾಗದ ತಕರಾರು ಇದ್ದು, ಮಾ.17 ರಂದು ಬೇಬಿ ಪೂಜಾರ್ತಿ ಅವರು ಕುಂದಾಪುರ ತಾಲೂಕಿನ ಆಜ್ರಿ ಗ್ರಾಮದ ಚೌಕುಳಮಕ್ಕಿ ಎಂಬಲ್ಲಿ ಅವರಿಗೆ ಸೇರಿದ ತೋಟದಲ್ಲಿ ಗೇರು ಬೀಜ ಹೆಕ್ಕುತ್ತಿರುವಾಗ ಆರೋಪಿಗಳು ಅಕ್ರಮ ಕೂಟ ಕೂಡಿಕೊಂಡು ಬಂದು ಸವಿತಾಳಿಗೆ ಮನೆ ಕಟ್ಟಲು ಯಾಕೇ ಜಾಗ ಕೊಡುವುದಿಲ್ಲ ಎಂದು ಕೇಳಿ ಅವಾಚ್ಯ ಶಬ್ದದಿಂದ ಬೈದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಎರಡೂ ಘಟನೆಗೆ ಸಂಬಂಧಿಸಿ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ಪ್ರತಿದೂರು ದಾಖಲಾಗಿದೆ.