ಪ್ರಧಾನಿ ಮೋದಿ ವಿರುದ್ಧ ಹಕ್ಕುಚ್ಯುತಿ ನಿರ್ಣಯಕ್ಕೆ ಅವಕಾಶ ಕೋರಿ ರಾಜ್ಯಸಭಾ ಅಧ್ಯಕ್ಷರಿಗೆ ಪತ್ರ ಬರೆದ ಕಾಂಗ್ರೆಸ್

ಹೊಸದಿಲ್ಲಿ ಮಾ.18 : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ, ಅಸಭ್ಯ ಹಾಗೂ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಹಕ್ಕುಚ್ಯುತಿ ನಿರ್ಣಯವನ್ನು ಮಂಡಿಸಲು ಅವಕಾಶ ನೀಡಬೇಕೆಂದು ಕೋರಿ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಪತ್ರಬರೆದಿದ್ದಾರೆ ಎಂದು ವರದಿಯಾಗಿದೆ.

ಸಂಸತ್ ನ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿಯವರ ಭಾಷಣದ ವಂದನಾ ನಿರ್ಣಯದ ಕುರಿತಾಗಿ ಫೆಬ್ರವರಿ 9ರಂದು ಪ್ರಧಾನಿಯವರು ಮಾಡಿದ ಭಾಷಣದ ಅಂಶಗಳನ್ನು ಪತ್ರದಲ್ಲಿ ಉಲ್ಲೇಖಿಸಿ ವೇಣುಗೋಪಾಲ್ ಅವರು ರಾಜ್ಯಸಭಾ ಅಧ್ಯಕ್ಷರಿಗೆ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರನ್ನು ತನ್ನ ಭಾಷಣಗಳಲ್ಲಿ ತಾನು ಉಲ್ಲೇಖಿಸುತ್ತಿಲ್ಲವೆಂಬ ಕಾಂಗ್ರೆಸ್ ನ ಆರೋಪಗಳಿಗೆ ವಂದನಾ ನಿರ್ಣಯದ ವೇಳೆ ಉತ್ತರಿಸಿದ್ದ ಮೋದಿ ಅವರು,‘ನೆಹರೂ ಅವರ ಯಾವುದೇ ವಂಶಸ್ಥರು ಅವರ ಉಪನಾಮವನ್ನು ಬಳಸುತ್ತಿಲ್ಲ’ವೆಂದು ಟೀಕಿಸಿದ್ದರು. ತನ್ನ ಭಾಷಣದಲ್ಲಿ ಪ್ರಧಾನಿಯವರು ಆದಾನಿ-ಹಿಂಡನ್ಬರ್ಗ್ ವಿವಾದದ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿರಲಿಲ್ಲ. ಆದರೆ ತನ್ನ ವಿರುದ್ಧ ಪ್ರತಿಪಕ್ಷಗಳು ಕೆಸರನ್ನು ಎರಚುವುದರಿಂದ, ಕಮಲವು(ಬಿಜೆಪಿಯ ಚುನಾವಣಾ ಚಿಹ್ನೆ) ಚೆನ್ನಾಗಿ ಬೆಳೆಯಲು ನೆರವಾಗಲಿದೆ ಎಂದು ಹೇಳಿದ್ದರು. ಮೋದಿ ಅವರ ಭಾಷಣದ ಸಂದರ್ಭದಲ್ಲಿ ಪ್ರತಿಪಕ್ಷ ಸದಸ್ಯರು ಸದನದ ಮುಂಭಾಗಕ್ಕೆ ಬಂದು ಅದಾನಿ ವಿರುದ್ಧ ಘೋಷಣೆಗಳನ್ನು ಕೂಗಿರುವ ಘಟನೆಯೂ ನಡೆದಿದೆ.

Leave a Reply

Your email address will not be published. Required fields are marked *

error: Content is protected !!