ಶೇ.17 ರಷ್ಟು ಮಧ್ಯಂತರ ವೇತನವನ್ನು ಶೀಘ್ರದಲ್ಲೇ ಹೆಚ್ಚಿಸಲಾಗುವುದು: ಸಿಎಂ ಭರವಸೆ

ಬೆಂಗಳೂರು ಮಾ.1 : ಏಳನೇ ವೇತನ ಆಯೋಗ ಜಾರಿಗೆ ಸಂಬಂಧಿಸಿ ಶೇ.17 ರಷ್ಟು ಮಧ್ಯಂತರ ವೇತನವನ್ನು ಶೀಘ್ರದಲ್ಲೇ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ.

ಏಳನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಹಿತಿ ನೀಡಿದ ಅವರು, ಶೀಘ್ರದಲ್ಲೇ ಸರ್ಕಾರಿ ನೌಕರರ ಭರವಸೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು. ಹಾಗೂ ಮಧ್ಯಂತರ ಆದೇಶ ಹೊರಡಿಸಲು ಸಿದ್ಧತೆ ನಡೆಯುತ್ತಿದೆ. ಶೇ.17ರಷ್ಟು ಮಧ್ಯಂತರ ವೇತನವನ್ನು ಶೀಘ್ರದಲ್ಲೇ ಹೆಚ್ಚಿಸಲಾಗುವುದು ಎಂದು ಹೇಳಿ ಸರ್ಕಾರಿ ನೌಕರರು ಮುಷ್ಕರ ಹಿಂಪಡೆಯುವಂತೆ ಮನವಿ ಮಾಡಿದರು.

ಇನ್ನು ಸಿ.ಎಂ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಅವರು, ಸರ್ಕಾರದ ಭರವಸೆ ಒಪ್ಪುವುದಿಲ್ಲ ಎಂದು ಮೊದಲೇ ಹೇಳಿದ್ದೇವೆ. ಕೇವಲ ಭರವಸೆಯಾಗಿ ಉಳಿಯದೆ ಅಧಿಕೃತ ಆದೇಶ ಬರಬೇಕು. ಅಧಿಕೃತ ಆದೇಶ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಸರ್ಕಾರದ ಆದೇಶದ ಪ್ರತಿ ಕೈಗೆ ಸಿಕ್ಕ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಸರ್ಕಾರದ ಆದೇಶ ಆಗದೇ ಹೊರತು ಧರಣಿ ಹಿಂಪಡೆಯಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!