ಗ್ರಾಮೀಣ ಪ್ರದೇಶಕ್ಕೆ 3,604 ಹೊಸ ಬಸ್- ಸುನಿಲ್ ಕುಮಾರ್
ಬೆಂಗಳೂರು ಫೆ.23 : ರಾಜ್ಯದ ಗ್ರಾಮೀಣ ಪ್ರದೇಶಗಳಿಗೆ 3,604 ಹೊಸ ಬಸ್ ಗಳ ಸೇವೆ ಲಭ್ಯವಾಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಅವರು ವಿಧಾನ ಸಭೆಯಲ್ಲಿ ಹೇಳಿದ್ದಾರೆ.
ಈ ಬಗ್ಗೆ ವಿಧಾನ ಸಭೆಯಲ್ಲಿ ಕಾಂಗ್ರೆಸ್ ನ ಈ. ತುಕಾರಾಂ ಪ್ರಶ್ನೆಗೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಪರವಾಗಿ ಉತ್ತರಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಅವರು, ರಾಜ್ಯದ ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಬಸ್ ಸೇವೆ ಒದಗಿಸುವುದಕ್ಕಾಗಿ 3,604 ಹೊಸ ಬಸ್ ಗಳನ್ನು ಖರೀದಿಸಲಾಗುತ್ತಿದೆ. ‘ಶಾಲಾ- ಕಾಲೇಜುಗಳು ಪುನರಾರಂಭವಾಗುವ ಜೂನ್ ತಿಂಗಳ ವೇಳೆಗೆ ಹೊಸ ಬಸ್ಗಳನ್ನು ಸೇವೆಗೆ ಒದಗಿಸಲಾಗುವುದು ಎಂದರು.
ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗಾಗಿ 800 ಬಸ್ಗಳನ್ನು ಖರೀದಿಸುವ ಪ್ರಸ್ತಾವಕ್ಕೂ ಸಂಪುಟ ಒಪ್ಪಿಗೆ ನೀಡಿದೆ’ ಎಂದ ಅವರು, ಕಲ್ಯಾಣ ಕರ್ನಾಟಕ ವ್ಯಾಪ್ತಿಯ 41 ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆ ಸಾರಿಗೆ ನಿಗಮದ 45 ಘಟಕಗಳಿಗೆ ಅಲ್ಲಿ ಹೆಚ್ಚಿನ ಬಸ್ಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. 925 ಚಾಲಕರು, 694 ಚಾಲಕ ಕಂ ನಿರ್ವಾಹಕರು ಮತ್ತು 300 ನಿರ್ವಾಹಕರ ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಈ ವೇಳೆ ಕಾಂಗ್ರೆಸ್ನ ಡಾ. ರಂಗನಾಥ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಕುಣಿಗಲ್ ತಾಲ್ಲೂಕಿನಲ್ಲಿ 315 ಗ್ರಾಮಗಳ ಪೈಕಿ 297 ಗ್ರಾಮಗಳಿಗೆ ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸುತ್ತಿವೆ. 18 ಗ್ರಾಮಗಳಲ್ಲಿ ರಸ್ತೆಗಳು ಭಾರಿ ವಾಹನಗಳ ಸಂಚಾರಕ್ಕೆ ಯೋಗ್ಯವಾಗಿಲ್ಲ’ ಎಂದು ಮಾಹಿತಿ ನೀಡಿದರು.