ಕಾರ್ಕಳ: ಸ್ಥಳೀಯರ ಜನ ಜೀವನದಲ್ಲಿ ಚೆಲ್ಲಾಟವಾಡುತ್ತಿರುವ ಕಲ್ಲು ಕೋರೆಯ ವಿರುದ್ಧ ಆಕ್ರೋಶ
ಕಾರ್ಕಳ ಫೆ.22: ವಿಪರೀತ ಶಬ್ದ ಮತ್ತು ಧೂಳಿನ ಸಮಸ್ಯೆಯನ್ನು ಉಂಟು ಮಾಡುತ್ತಿರುವ ಕಾರ್ಕಳ ತಾಲೂಕಿನ ನಕ್ರೆ ಪೊಸನೊಟ್ಟುದಲ್ಲಿ ಕಾರ್ಯಚರಿಸುತ್ತಿರುವ ಕಲ್ಲಿನ ಕಾರ್ಖಾನೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇಲ್ಲಿ ಕಳೆದ 4 ವರ್ಷಗಳಿಂದ ಕಾರ್ಯಚರಿಸುತ್ತಿರುವ ಕಲ್ಲಿನ ಕಾರ್ಖಾನೆಗಳಿಂದ ವಿಪರೀತ ಶಬ್ದ ಧೂಳು ಬರುತ್ತಿದ್ದು ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅತಿಯಾದ ಭಾರ ಹೊತ್ತು ಬರುವ ಲಾರಿಗಳಿಂದಾಗಿ ರಸ್ತೆಗಳೆಲ್ಲ ಹದಗೆಟ್ಟಿವೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕಾರ್ಖಾನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ನಿವಾಸಿ ರಾಬಿನ್ ಡಿಸೋಜ ಅವರು, “ಸುಮಾರು 4 ಕಾರ್ಖಾನೆಗಳಿದ್ದು ರಾತ್ರಿ ಹಗಲೆನ್ನದೆ ಕಾರ್ಯನಿರ್ವಹಿಸುತ್ತವೆ. ಒಂದು ದಿನಕ್ಕೆ ಸುಮಾರು 35ಕ್ಕೂ ಅಧಿಕ ಬೃಹತ್ ಲಾರಿಗಳು ನಿಗದಿಗಿಂತ ಹೆಚ್ಚಿನ ಬಾರ ಹೊತ್ತು ಕಿರಿದಾದ ರಸ್ತೆಯಲ್ಲಿ ಸಂಚರಿಸುತ್ತಿದ್ದು, ರಸ್ತೆಗಳು ಹದಗೆಟ್ಟಿವೆ’. ಅಲ್ಲದೆ “ಕಲ್ಲಿನ ಕಾರ್ಖಾನೆಗಳಿಂದಾಗಿ ವಿಪರೀತ ಧೂಳು ನೆರೆಯ ಮನೆಗಳಲ್ಲಿ ಬಂದು ಬೀಳುತ್ತಿದೆ. ರಾತ್ರಿ ಹೊತ್ತು ಕಾರ್ಖಾನೆಗಳಿಂದ ಬರುವ ಅತಿಯಾದ ಶಬ್ದದಿಂದ ಸ್ಥಳೀಯರಿಗೆ ನಿದ್ದೆ ಮರೀಚಿಕೆಯಾಗಿದೆ. ಮಕ್ಕಳ ವಿದ್ಯಾಭ್ಯಾಸದ ಮೇಲೂ ಇದು ದುಷ್ಪರಿಣಾಮ ಬೀರುತ್ತಿದೆ. ಅಲ್ಲದೆ, ರೋಗಗಳು ಹರಡುವ ಭೀತಿಯಲ್ಲಿ ಇಲ್ಲಿನ ಜನರು ದಿನದೂಡುತ್ತಿದ್ದಾರೆ. ಇದಕ್ಕೆಲ್ಲ ಹೊಣೆ ಯಾರು? ಅಮಾಯಕರ ಜೀವಕ್ಕೆ ಬೆಲೆ ಇಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಹಾಗೂ ಧೂಳಿನ ಪರಿಣಾಮ ಏನಾಗಬಹುದು ಎಂದು ಯಾರೂ ಊಹಿಸಿರಲಿಕ್ಕಿಲ್ಲ. ಕ್ಯಾನ್ಸರ್, ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಜನ ಸಾಮಾನ್ಯರು ಬಳಲುವ ದಿನಗಳು ದೂರವಿಲ್ಲ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತು ಅಮಾಯಕರ ಪ್ರಾಣ ಹಾಗೂ ಪರಿಸರದ ಮೇಲೆ ಆಗುತ್ತಿರುವ ಪರಿಣಾಮ ಮನಗಂಡು ಕಾರ್ಖಾನೆಗಳ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.