ಬೊಮ್ಮಾಯಿ ಬಜೆಟ್ – 4292 ಎಕರೆ ಗೇರು ಕೃಷಿ ಭೂಮಿಯನ್ನು ಶ್ರೀಮಂತರಿಗೆ ವರ್ಗಾಯಿಸುವ ಹುನ್ನಾರ – ಸಿಪಿಐ(ಎಂ) ವಿರೋಧ
ಉಡುಪಿ, ಫೆ.21 (ಉಡುಪಿ ಟೈಮ್ಸ್ ವರದಿ) : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ನಲ್ಲಿ ನೀಡಿರುವ ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ 4,292 ಎಕರೆ ಸರಕಾರಿ ಒಡೆತನದ ಗೇರು ಲೀಸ್ ಭೂಮಿಯನ್ನು ನಿಗದಿತ ಮೌಲ್ಯ ನೀಡಿದಲ್ಲಿ ಗುತ್ತಿಗೆದಾರರಿಗೆ ಹಸ್ತಾಂತರಿಸುವ ಪ್ರಸ್ತಾಪವನ್ನು ಸಿಪಿಐ(ಎಂ) ವಿರೋಧಿಸಿದೆ.
ಈ ಬಗ್ಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಾಲಕ್ರಷ್ಣ ಶೆಟ್ಟಿ ಅವರು, ಎರಡು ಜಿಲ್ಲೆಗಳಲ್ಲಿ ಸಾವಿರಾರು ನಿವೇಶನ ರಹಿತರು, ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಅವುಗಳ ವಿಲೆ ಆಗಿಲ್ಲ. ನಿವೇಶನ ರಹಿತರ ಹೋರಾಟದ ನಂತರ ಪಂಚಾಯತ್, ಪುರಸಭೆ, ನಗರ ಸಭೆ ಮಟ್ಟದಲ್ಲಿ ಪಟ್ಟಿಯನ್ನು ತಯಾರಿಸಲಾಗಿದೆ. ನಿವೇಶನ ನೀಡಲು ಸರಕಾರಿ ಭೂಮಿಯೇ ಇಲ್ಲ ಎಂಬ ವಾದ ಮಂಡಿಸಲಾಗುತ್ತಿದೆ. 94ಸಿ ಮತ್ತು 94ಸಿಸಿ ಅಡಿಯಲ್ಲಿ ಈಗಾಗಲೆ ವಾಸವಾಗಿರುವ ಗ್ರಾಮೀಣ ಮತ್ತು ನಗರ ಪ್ರದೇಶದ ಬಡವರಿಗೆ ಕಾನೂನು ತೊಡಕಿನ ನೆಪ ಹೇಳಿ ಹಕ್ಕು ಪತ್ರ ನೀಡಲಾಗಿಲ್ಲ. ಕ್ರಷಿ ಕಾಯಿದೆಗೆ ತಿದ್ದುಪಡಿ ತಂದು, ಗರಿಷ್ಠ ಭೂ ಮಿತಿಯನ್ನು ಹೆಚ್ಚಿಸಿದ್ದು ಮಾತ್ರವಲ್ಲದೆ ಕೃಷಿಕರಲ್ಲದವರಿಗೂ ಕ್ರಷಿ ಭೂಮಿಯನ್ನು ಮಾರಾಟ ಮಾಡಬಹುದೆಂಬ ತಿದ್ದುಪಡಿ ತಂದಿರುವುದರಿಂದ ಗೇರು ಕೃಷಿ ಭೂಮಿ ಕಾರ್ಪೊರೇಟ್ ಕಂಪೆನಿಗಳ ಪಾಲಾಗಲಿದೆ ಎಂದು ಎಚ್ಚರಿಸಿದ್ದಾರೆ.