ಇದೊಂದು ಬಿಸಿಲು ಕುದುರೆ ಬಜೆಟ್-ಡಿ.ಕೆ ಶಿವಕುಮಾರ್ ಟೀಕೆ

ಬೆಂಗಳೂರು, ಫೆ.18 : ಈ ಬಜೆಟ್ ಕಣ್ಣಿಗೆ ಕಾಣುತ್ತದೆ, ಆದರೆ ಕೈಗೆ ಸಿಗಲ್ಲ ಇದೊಂದು ಬಿಸಿಲು ಕುದುರೆ ಬಜೆಟ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ

ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ರಾಜ್ಯ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು,  ಇದೊಂದು ಬಿಸಿಲು ಕುದುರೆ ಬಜೆಟ್, ಕೈಗೆ ಏನೂ ಸಿಗಲ್ಲ. ಈ ಬಜೆಟ್, ಜಾತ್ರೆಯಲ್ಲಿ ಸಿಗುವ ಬಣ್ಣದ ಕನ್ನಡಕದಂತೆ, ಅದರಲ್ಲಿ ನೋಡಿದರೆ ಏನೂ ಕಾಣುವುದಿಲ್ಲ ಎಂದು ಟೀಕಿಸಿದ್ದಾರೆ.

ಕಳೆದ ಬಜೆಟ್‍ನಲ್ಲಿ ಶೇ.50ರಷ್ಟು ಅನುದಾನ ಖರ್ಚು ಮಾಡಿಲ್ಲ. ಕಳೆದ ಚುನಾವಣೆ ಸಂದರ್ಭದಲ್ಲಿ ಅವರು ಕೊಟ್ಟ 600 ಭರವಸೆಗಳ ಪೈಕಿ 550 ಭರವಸೆ ಈಡೇರಿಸಿಲ್ಲ. ಆ ಮೂಲಕ ಶೇ.90ರಷ್ಟು ವಿಫಲವಾಗಿದ್ದಾರೆ. ಬಿಜೆಪಿ ಸರಕಾರ ಜನರ ಕಿವಿಗೆ ಹೂ ಇಡುವ ಪ್ರಯತ್ನ ಮಾಡುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ನಾಯಕರು ಕಿವಿ ಮೇಲೆ ಚೆಂಡು ಹೂ ಇಟ್ಟುಕೊಂಡು ಪ್ರತಿಭಟನೆ ಮಾಡಿದ್ದೇವೆ. ಇದೊಂದು ಗೊತ್ತು ಗುರಿ ಇಲ್ಲದ ಬಜೆಟ್ ಆಗಿದೆ ಎಂದು ಹೇಳಿದ್ದಾರೆ.

‘ಬೊಮ್ಮಾಯಿ ಸರಕಾರದ 2023-24ರ ಬಜೆಟ್‍ನಲ್ಲಿ ರೈತರು, ಕಾರ್ಮಿಕರು, ಯುವಕರು, ವರ್ತಕರು ಯಾರಿಗೂ ಲಾಭವಿಲ್ಲ. ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆಯೂ ಮಾತನಾಡಿಲ್ಲ. ಸ್ವಯಂ ಉದ್ಯೋಗ ಯೋಜನೆಗಳೂ ಇಲ್ಲ. ಹೀಗಾಗಿ ಈ ಬಜೆಟ್‍ನಿಂದ ಯಾವುದೇ ವರ್ಗಕ್ಕೂ ಪ್ರಯೋಜನ ಆಗುವುದಿಲ್ಲ ಎಂದರು.

ಮೇಕೆದಾಟು, ಮಹದಾಯಿ, ಕೃಷ್ಣ ಯೋಜನೆ ವಿಚಾರವಾಗಿ ಕಳೆದ ಬಜೆಟ್‍ನಲ್ಲಿ ಹಣ ಮೀಸಲಿಟ್ಟ ಸರಕಾರ ಒಂದು ನಯಾ ಪೈಸೆ ಖರ್ಚು ಮಾಡಿಲ್ಲ. ಮಾತೆತ್ತಿದರೆ ಡಬಲ್ ಇಂಜಿನ್ ಸರಕಾರ ಎನ್ನುತ್ತಾರೆ. ಆದರೆ, ಈ ಸರಕಾರದ ಇಂಜಿನ್ ಆಫ್ ಆಗಿದೆ. ಕೇವಲ ಹೊಗೆ ಮಾತ್ರ ಬರುತ್ತಿದೆ ಎಂದರು.

ಇದೇ ವೇಳೆ ಅವರು, ಈಗ ರಾಮನಗರದಲ್ಲಿ ರಾಮಮಂದಿರ ಕಟ್ಟಲು ಮುಂದಾಗಿದ್ದಾರೆ. ಅವರು ರಾಮನ, ಸೀತೆ, ಅಶ್ವತ್ಥ್ ನಾರಾಯಣ, ಬೊಮ್ಮಾಯಿ, ಯಡಿಯೂರಪ್ಪನವರ ಮಂದಿರವಾದರೂ ಕಟ್ಟಲಿ. ನನಗೆ ನಮ್ಮ ಪಕ್ಷದ ಕಚೇರಿಯೇ ದೇವಾಲಯ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!