ಗಂಗೊಳ್ಳಿ: ಕಾಲು ಜಾರಿ ನದಿಗೆ ಬಿದ್ದು ವ್ಯಕ್ತಿ ಮೃತ್ಯು
ಗಂಗೊಳ್ಳಿ ಫೆ.17 (ಉಡುಪಿ ಟೈಮ್ಸ್ ವರದಿ): ಪಂಪ್ ಸೆಟ್ ರಿಪೇರಿ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಆಲೂರು ಗ್ರಾಮದ ತಾರಿಬೇರಿನ ಸೌಪರ್ಣಿಕ ನದಿಯಲ್ಲಿ ನಿನ್ನೆ ಸಂಜೆ ನಡೆದಿದೆ.
ಆಲೂರು ಗ್ರಾಮದ ತಾರಿಬೇರು ನಿವಾಸಿ ಸಂಜೀವ ಪೂಜಾರಿ (50) ಮೃತಪಟ್ಟವರು. ಇವರು ತಮ್ಮ ಮನೆಯ ತೋಟಕ್ಕೆ ನೀರು ಬಿಡುವ ಸಲುವಾಗಿ ಸೌಪರ್ಣಿಕ ನದಿಗೆ ಅಳವಡಿಸಿರುವ ಪಂಪ್ ಸೆಟ್ ನ ಪುಟ್ ಬಾಲ್ ಪೈಪ್ನ್ನು ಸರಿಪಡಿಸುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನದಿಯ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎಂಬುದಾಗಿ ಮೃತರ ಮಗ ಸಂಕೇತ ಎಂಬವರು ನೀಡಿದ ಮಾಹಿತಿಯಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.