ಮಂಗಳೂರು: ಅತಿಯಾದ ಮೊಬೈಲ್ ಬಳಕೆ-ತಾಯಿ ಬೈದಿದ್ದಕ್ಕೆ ಬಾಲಕ ಆತ್ಮಹತ್ಯೆ

ಮಂಗಳೂರು ಜ.31 : ಅತೀಯಾಗಿ ಮೊಬೈಲ್ ಬಳಸದಂತೆ ತಾಯಿ ಬೈದು ಬುದ್ದಿಮಾತು ಹೇಳಿದ್ದಕ್ಕೆ 9 ನೇ ತರಗತಿ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪದವು ಬಿ ಹಳ್ಳಿಯ ಕೋಟಿಮುರದಲ್ಲಿರುವ ಅಪಾರ್ಟ್‍ಮೆಂಟ್‍ನಲ್ಲಿ ವಾಸಿಸುತ್ತಿದ್ದ ಜಗದೀಶ್ ಮತ್ತು ವಿನಯಾ ದಂಪತಿಯ ಪುತ್ರ ಜ್ಞಾನೇಶ್(14) ಆತ್ಮಹತ್ಯೆ ಮಾಡಿಕೊಂಡ ಬಾಲಕ.

9 ತರಗತಿ ವಿದ್ಯಾರ್ಥಿಯಾಗಿದ್ದ ಈತ ನಿರಂತರವಾಗಿ ಮೊಬೈಲ್ ಬಳಸುತ್ತಿದ್ದ ಮತ್ತು ಈ ಕಾರಣಕ್ಕಾಗಿ ಜ.30 ರಂದು ತಾಯಿ ಈತನಿಗೆ ಬೈದಿದ್ದಾರೆ. ತಾಯಿಯ ಬೈಗುಳದ ಬಳಿಕ ಸ್ನಾನ ಮಾಡಿ ಬರುವುದಾಗಿ ಹೇಳಿ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. ಆದರೆ ಬಹಳ ಹೊತ್ತಾದರೂ ಆತ ವಾಪಸ್ ಬಾರದ ಕಾರಣ ತಂದೆ ಜಗದೀಶ್ ಸ್ನಾನಗೃಹದ ಕಿಟಕಿಯಿಂದ ಇಣುಕಿ ನೋಡಿದಾಗ ಜ್ಞಾನೇಶ್ ಬಾತ್ ರೂಮ್ ನಲ್ಲಿ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಕೂಡಲೇ ಆತನನ್ನು ನೇಣಿನಿಂದ ಕೆಳಗಿಳಿಸಿ ನೋಡಿದಾಗ ಜ್ಞಾನೇಶ ಅದಾಗಲೇ ಮೃತಪಟ್ಟಿರುವುದು ತಿಳಿದು ಬಂದಿದೆ.

ಸ್ಥಳಕ್ಕೆ ಕಂಕನಾಡಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್ : 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್- 4, ಬೆಂಗಳೂರು.

Leave a Reply

Your email address will not be published. Required fields are marked *

error: Content is protected !!