ಉ.ಕ ಜಿಲ್ಲೆಯಲ್ಲಿ ಮತ್ತೆ ಭೂ ಕುಸಿತ ಭೀತಿ- ಭೂ ವಿಜ್ಞಾನಿಗಳಿಂದ ಎಚ್ಚರಿಕೆ
ಕಾರವಾರ ಜ.31 : ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮತ್ತೆ ಭೂಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತಕ್ಕೆ ಭೂ ವಿಜ್ಞಾನಿಗಳು ನೀಡಿದ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಇದೀಗ ಉತ್ತರ ಕನ್ನಡ ಜಿಲ್ಲೆಯ ಜನರಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ.
ಈ ಹಿಂದೆ ವಾಡಿಕೆಗಿಂತ ಹೆಚ್ಚು ಮಳೆಯಾದ್ದರಿಂದ ಕಾರವಾರ, ಭಟ್ಕಳ, ಕುಮಟಾ, ಶಿರಸಿ ಭಾಗದಲ್ಲಿ ಭೂಕುಸಿತ ಉಂಟಾಗಿ ಅನೇಕರು ಮನೆಗಳನ್ನು ಕಳೆದುಕೊಂಡಿದ್ದರು. 63 ಜನರು ಸಾವನ್ನಪ್ಪಿದ್ದರು. ಭೂ ಕುಸಿತಕ್ಕೆ ಹೆದ್ದಾರಿ ಅಗಲೀಕರಣಕ್ಕೆ ಅವೈಜ್ಞಾನಿಕ ಗುಡ್ಡ ಕೊರೆತ, ಅರಣ್ಯನಾಶ, ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾರಣ ಎಂದು ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ವರದಿ ನೀಡಿದೆ. ಘಟ್ಟ ಪ್ರದೇಶದ ಮಣ್ಣಿನ ಪದರ ಸಡಿಲವಾಗಿದ್ದು, ಅರಣ್ಯ ಭಾಗದಲ್ಲಿ ಹೆಚ್ಚಿನ ಅಭಿವೃದ್ಧಿಗೆ ತಡೆಯೊಡ್ಡದಿದ್ದರೇ ಮತ್ತೆ ಭೂಕುಸಿತವಾಗಿ ದೊಡ್ಡ ಹಾನಿ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.
ಕಳೆದ 3 ವರ್ಷಗಳಿಂದ ಪಶ್ಚಿಮಘಟ್ಟವನ್ನು ಹಂಚಿಕೊ0ಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಭೂ ಕುಸಿತ, ಪ್ರವಾಹ ಸಮಸ್ಯೆಗಳು ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಕಳೆದ 3 ವರ್ಷಗಳಿಂದ ಉತ್ತರ ಕನ್ನಡ ಭಾಗದಲ್ಲಿ ನಿರಂತರ ಅಧ್ಯಯನ ಕೈಗೊಂಡಿದೆ. ಅಲ್ಲದೆ ಕಳೆದ ವಾರ ಜಿಲ್ಲಾಡಳಿತಕ್ಕೆ ಸಲ್ಲಿಸಿದ ವರದಿಯಲ್ಲಿ ಮತ್ತೆ ಭೂ ಕುಸಿತವಾಗುವ ಎಚ್ಚರಿಕೆಯನ್ನು ಸಂಸ್ಥೆ ನೀಡಿದೆ.