ಆದಿವುಡುಪಿಯ ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸ್ಥಾಪಕ ವಿಸ್ವಸ್ಥ ಕೆ. ತೇಜಪ್ಪ ಬಂಗೇರ ನಿಧನ
ಉಡುಪಿ ಜ.31 (ಉಡುಪಿ ಟೈಮ್ಸ್ ವರದಿ) : ಆದಿಡುಪಿಯ ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸ್ಥಾಪಕ ಕೆ. ತೇಜಪ್ಪ ಬಂಗೇರ ಇವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಮಟ್ಟು, ಅಂಬಾಡಿಯ ನರ್ವ ಪೂಜಾರಿ, ಕಲ್ಸಂಕದ ಕೊರಪಳು ಪೂಜಾರ್ತಿ ದಂಪತಿಗಳ ಮಗನಾಗಿ 1939ರ ಎ.27 ರಂದು
ಜನಿಸಿದ ಇವರು ಎಸ್ಎಸ್ಎಲ್ಸಿ ವಿದ್ಯಾಭ್ಯಾಸದ ನಂತರ ಟೈಪ್ ರೈಟಿಂಗ್, ಮತ್ತು ಶಾರ್ಟ್ ಹ್ಯಾಂಡ್ ಗಳಲ್ಲಿ ತರಬೇತಿ ಪಡೆದಿದ್ದರು. 1958 ರಲ್ಲಿ ಕರ್ನಾಟಕ ಸರಕಾರದ ಮೀನುಗಾರಿಕಾ ವಿಭಾಗದಲ್ಲಿ ನೌಕರಿ ಪ್ರಾರಂಭಿಸಿ 1997 ರಲ್ಲಿ ಸಬ್ ಪೋಸ್ಟ್ ಮಾಸ್ಟರ್ ಆಗಿ ನಿವೃತ್ತರಾಗಿದ್ದರು.
ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಆದಿವುಡುಪಿ ಇದರ ಸ್ಥಾಪಕ ವಿಷ್ವಸ್ತರಾದ ಇವರು ಸಂಸ್ಥೆಯ ಕಾರ್ಯದರ್ಶಿ, ಕಾರ್ಯ ನಿರ್ವಾಹಕ ವಿಶ್ವಸ್ತರಾಗಿ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಪೋಸ್ಟ್ ಮ್ಯಾನ್ ಯೂನಿಯನ್ ನ ಕಾರ್ಯದರ್ಶಿಯಾಗಿ, ಬಿಲ್ಲವರ ಸೇವಾ ಸಂಘ ಬನ್ನಂಜೆಯ ಕಾರ್ಯದರ್ಶಿಯಾಗಿ, ಆತ್ಮಾನಂದ ಸರಸ್ವತಿ ಐ. ಟಿ. ಐ. ಬಿಲ್ಲಾಡಿ ಇದರ ಉಡುಪಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಯೋಗಾಭ್ಯಾಸದಲ್ಲಿ ವಿಶೇಷ ಪರಿಣಿತಿ ಪಡೆದಿದ್ದ ಇವರು, ಸಿದ್ದ ಸಮಾಧಿ ಯೋಗ ಬೆಂಗಳೂರು, ಪತಂಜಲಿ ಶ್ರೀ.ರಾಮ್ ದೇವ್ ಬಾಬಾ ಗುರೂಜಿ ಉಡುಪಿ ವಲಯ, ರವಿ ಶಂಕರ್ ಗುರೂಜಿಯವರ ಆರ್ಟ್ ಆಫ್ ಲೀವಿಂಗ್ ನ ಯೋಗ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು.