ಕಾರ್ಕಳ: ಅನುಮನಾಸ್ಪದ ರೀತಿಯಲ್ಲಿ ಲಾರಿ ಚಾಲಕ ಮೃತ್ಯು-ಮತ್ತೋರ್ವ ಚಾಲಕ ಕೊಲೆ ಮಾಡಿರುವ ಶಂಕೆ

ಕಾರ್ಕಳ ಜ.31 (ಉಡುಪಿ ಟೈಮ್ಸ್ ವರದಿ) : ತಾಲೂಕಿನ ಮುಡಾರು ಗ್ರಾಮದ ಮುಡ್ರಾಲು ಎಂಬಲ್ಲಿನ ಗೇರು ಫ್ಯಾಕ್ಟರಿಯೊಂದಕ್ಕೆ ಗೇರು ಬೀಜ ಪೂರೈಕೆ ಮಾಡುತ್ತಿದ್ದ ಲಾರಿ ಚಾಲಕನೋರ್ವ ಅನುಮನಾಸ್ಪದ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮತ್ತೋರ್ವ ಲಾರಿ ಚಾಲಕ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ತಮಿಳುನಾಡು ಮೂಲದ ಮಣಿ (36) ಮೃತಪಟ್ಟ ವ್ಯಕ್ತಿ.

ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಮುಡ್ರಾಲು ಎಂಬಲ್ಲಿ ಇರುವ ಶ್ರೀದೇವಿ ಕ್ಯಾಶ್ಯೂ ಫ್ಯಾಕ್ಟರಿಗೆ ಪ್ರತಿವರ್ಷ ತಮಿಳುನಾಡಿನಿಂದ ಗೇರು ಬೀಜ ಲೋಡ್ ಬರುತ್ತಿತ್ತು. ಅದರಂತೆ ಜ.30 ರಂದು ಸಂಜೆ ಕೂಡಾ ಗೇರುಬೀಜದ ಲೋಡ್ ಇರುವ ಲಾರಿಗಳು ಬಂದಿದ್ದು ಅವರುಗಳು ಅನ್ ಲೋಡ್ ಮಾಡಿ ಹೋಗಿದ್ದರು. ಆದರೆ ಮತ್ತೆರಡು ಲಾರಿಗಳು ಸಂಜೆ 5:30 ಗಂಟೆಗೆ ಬಂದಿದ್ದು ತಡವಾಗಿದ್ದರಿಂದ ಲಾರಿಯು ಅನ್‍ಲೋಡ್ ಆಗದೇ ಫ್ಯಾಕ್ಟರಿಯ ಬಳಿ ನಿಂತುಕೊಂಡಿತ್ತು. ಲಾರಿಗಳ ಚಾಲಕ ಹಾಗೂ ಬದಲಿ ಚಾಲಕರುಗಳು ಕೂಡಾ ಅಲ್ಲಿಯೇ ಇದ್ದು ರಾತ್ರಿ 8:30 ಗಂಟೆಗೆ ಪ್ರವೀಣ್ ಪೂಜಾರಿ ಎಂಬವರು ಫ್ಯಾಕ್ಟರಿಯ ಮೇಲ್ಗಡೆ ಕೆಲಸ ಮಾಡುತ್ತಿರುವಾಗ ಲಾರಿ ನಿಲ್ಲಿಸಿದ ಸ್ಥಳದಿಂದ ಜೋರಾಗಿ ಬೊಬ್ಬೆ ಕೇಳಿದಾಗ ಅಲ್ಲಿಗೆ ಹೋಗಿ ನೋಡಿದ್ದಾರೆ. ಈ ವೇಳೆ ಒಂದು ಲಾರಿಯ ಚಾಲಕ ಮಣಿಯು ಲಾರಿಯ ಎದುರುಗಡೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತನ ಎಡ ಕಾಲರ್ ಬೋನ್ ನ ಬಳಿ ಆಯುಧದಿಂದ ಇರಿದು ಗಾಯಗೊಳಿಸಿ ಕೊಲೆ ಮಾಡಿರುವುದು ಕಂಡುಬಂದಿದೆ.

ಅದರಂತೆ ಲಾರಿಯ ಇನ್ನೋರ್ವ ಚಾಲಕ ವೀರಬಾಹು ಹಾಗೂ ಮೃತ ಮಣಿ ಗಲಾಟೆ ಮಾಡಿಕೊಳ್ಳುತ್ತಿದ್ದು ಯಾವುದೋ ಕಾರಣದಿಂದ ಲಾರಿಯ ಇನ್ನೋರ್ವ ಚಾಲಕ ವೀರಬಾಹು ಮಣಿಯನ್ನು ಕೊಲೆ ಮಾಡಿರುವ ಬಗ್ಗೆ ಸಂಶಯ ಇರುವುದಾಗಿ ಪ್ರವೀಣ್ ಪೂಜಾರಿ ಅವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!