ಮಂಗಳೂರು: ಸೌದಿ ಅರೇಬಿಯಾದ ಕರೆನ್ಸಿ ನೀಡುವುದಾಗಿ ವಂಚನೆ-ದೂರು ದಾಖಲು

ಮಂಗಳೂರು ಜ.31 : ಅಪರಿಚಿತ ವ್ಯಕ್ತಿಯೋರ್ವ ಸೌದಿ ಅರೇಬಿಯಾದ ಕರೆನ್ಸಿ ಕೊಡುವುದಾಗಿ ನಂಬಿಸಿ 4 ಲಕ್ಷ ರೂ. ಪಡೆದುಕೊಂಡು ವಂಚಿಸಿರುವುದಾಗಿ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು ಜಂಕ್ಷನ್‍ನಲ್ಲಿರುವ ತಾಜ್ ಬುಕ್‍ಸ್ಟಾಲ್‍ಗೆ ಬಂದಿದ್ದ ಅಪರಿಚಿತ ವ್ಯಕ್ತಿಯು ತನ್ನ ಬಳಿ ಸೌದಿ ಅರೇಬಿಯಾದ ಕರೆನ್ಸಿ ಇದೆ. ಅದನ್ನು ಕಡಿಮೆ ಬೆಲೆಗೆ ನಿಮಗೆ ಕೊಡುತ್ತೇನೆಂದು ವ್ಯಕ್ತಿಯೊಬ್ಬರಿಗೆ ಹೇಳಿದ್ದ ಎನ್ನಲಾಗಿದೆ. ಜ.29 ರಂದು ಈ ಅಪರಿಚಿತ ವ್ಯಕ್ತಿಯು 4 ಲಕ್ಷ ರೂ. ರೆಡಿ ಮಾಡಿ ಮಂಗಳೂರಿಗೆ ತಂದು ಕರೆ ಮಾಡುವಂತೆ ತಿಳಿಸಿದ್ದ. ಇದನ್ನು ನಂಬಿದ ದೂರುದಾರ ವ್ಯಕ್ತಿ ನಿನ್ನೆ ಅಪರಿಚಿತ ವ್ಯಕ್ತಿಯ ಮೊಬೈಲ್ ನಂಬರಿಗೆ ಕರೆ ಮಾಡಿದರು. ಈ ವೇಳೆ ಮಂಗಳೂರಿನ ಸ್ಟೇಟ್‍ಬ್ಯಾಂಕ್ ಸಮೀಪದ ಸರ್ವೀಸ್ ಬಸ್ ನಿಲ್ದಾಣಕ್ಕೆ ಹೋಗುವ ಮೈದಾನದ ಬಳಿ ಇರುವ ಮೆಸ್ಕಾಂ ಕಚೇರಿಯ ಮುಂಭಾಗದ ರಸ್ತೆಯಲ್ಲಿ ಕಾಯುವಂತೆ ಆರೋಪಿ ತಿಳಿಸಿದ್ದಾನೆ. ಅದರಂತೆ ಅವರು ಕಾಯುತ್ತಾ ನಿಂತುಕೊಂಡಿದ್ದಾಗ ಅಲ್ಲಿಗೆ ಬಂದ ಆರೋಪಿ ಅಪರಿಚಿತ ವ್ಯಕ್ತಿಯು ಪ್ಲಾಸ್ಟಿಕ್ ಕಟ್ಟನ್ನು ನೀಡಿ ಅವರ ಕೈಯಲ್ಲಿ 4 ಲಕ್ಷ ರೂ.ವನ್ನು ಪಡೆದು ತಕ್ಷಣ ಓಡಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!